ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣದ ವೈರಲ್ ಸೆಲೆಬ್ರಿಟಿ ಓರಿ ಮತ್ತು ಅವರ ಗೆಳೆಯರ ವಿರುದ್ಧ ದೂರು ದಾಖಲಾಗಿದೆ.
ಓರಿ ಮತ್ತು ಅವರ ಕೆಲವು ಗೆಳೆಯರು ಇತ್ತೀಚೆಗಷ್ಟೆ ಜಮ್ಮು ಕಾಶ್ಮೀರದ ಕಾತ್ರನ ಹೋಟೆಲ್ ರೂಂ ಒಂದರಲ್ಲಿ ಮದ್ಯ ಸೇವನೆ ಮಾಡಿದ್ದರು. ಆದರೆ ಓರಿ ಮತ್ತು ಅವರ ಗೆಳೆಯರು ಮದ್ಯ ಸೇವಿಸಿರುವ ಪ್ರದೇಶ ಪುಣ್ಯಕ್ಷೇತ್ರವಾಗಿದ್ದು ಅಲ್ಲಿ ಮದ್ಯ ನಿಷೇಧವಾಗಿದೆ. ಓರಿ ಮತ್ತು ಅವರ ಗೆಳೆಯರ ಈ ಕುಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪೊಲೀಸರು ಪ್ರಕರಣ ಸಹ ದಾಖಲಿಸಿಕೊಂಡಿದ್ದಾರೆ.
ಓರಿ ಮತ್ತು ಗೆಳೆಯರು ಇತ್ತೀಚೆಗಷ್ಟೆ ಜಮ್ಮು ಕಾಶ್ಮೀರದ ಕಾತ್ರಗೆ ಹೋಗಿದ್ದರು. ಅಲ್ಲಿಯೇ ಪ್ರಸಿದ್ಧ ವೈಷ್ಣೋದೇವಿ ದೇವಾಲಯ ಇದೆ. ದೇವಾಲಯ ಇರುವ ಕಾರಣ ಕಾತ್ರ ನಗರದಲ್ಲಿ ಮದ್ಯಕ್ಕೆ ನಿಷೇಧ ಹೇರಲಾಗಿದೆ. ಮದ್ಯ ಮಾತ್ರವೇ ಅಲ್ಲದೆ ಇಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಕೆಗೆ ಸಹ ನಿಷೇಧ ಹೇರಲಾಗಿದೆ. ಆದರೆ ಇಲ್ಲಿನ ಹೋಟೆಲ್ ಒಂದರಲ್ಲಿ ತಂಗಿದ್ದ ಓರಿ ಮತ್ತು ಗೆಳೆಯರು ಹೋಟೆಲ್ ರೂಂನಲ್ಲಿ ಮದ್ಯ ಸೇವನೆ ಮಾಡಿದ್ದಾರೆ. ಇದು ಈಗ ವಿವಾದಕ್ಕೆ ಕಾರಣವಾಗಿದೆ.
ಕಾತ್ರ ಪೊಲೀಸರು ಒರ್ಹಾನ್ ಅವತ್ರಮಣಿ ಅಲಿಯಾಸ್ ಓರಿ, ದರ್ಶನ್ ಸಿಂಗ್, ಪಾರ್ಥ ರೈನಾ, ರಿತಿಕ್ ಸಿಂಗ್, ರಾಶಿ ದತ್ತ, ರಕ್ಷಿತಾ ಭೋಗಲ್, ಶಗುನ್ ಕೋಹ್ಲಿ, ಅನಸ್ಟಾಲಿಯಾ ಅರ್ಜಮಸ್ಕಿನಾ ಅವರುಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಡಿವೈಎಸ್ಪಿ ನೇತೃತ್ವದ ತನಿಖಾ ತಂಡವನ್ನು ರಚಿಸಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯುವ ಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ.