ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾಕಿಷ್ಟು ಸಾಲ ಮಾಡಿದ್ದೀರಿ? ಹಣ ಏನು ಮಾಡ್ತಿದ್ದೀರಿ ಎಂದು ಕೇಳಿದ್ದಕ್ಕೆ ಸಿಟ್ಟಾದ ಪತಿ, ಪತ್ನಿಯ ಕತ್ತನ್ನೇ ಸೀಳಿ ಕೊಂದಿದ್ದಾನೆ.
ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಇರ್ಫಾನ್ ಎಂಬಾತ ಪತ್ನಿ ಮಾಸಬ್ಬಿಯನ್ನು ಭೀಕರವಾಗಿ ಕೊಂದಿದ್ದಾನೆ.
ಇರ್ಫಾನ್ ಹಾಗೂ ಮಾಸಬ್ಬಿಗೆ ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲಿ ಜವಾಬ್ದಾರಿ ಹೆಚ್ಚಾದಂತೆ ಹಣದ ಅಗತ್ಯ ಹೆಚ್ಚಾಗಿದೆ, ಇರ್ಫಾನ್ ಹೆಚ್ಚು ಸಾಲ ಮಾಡಿಕೊಂಡಿದ್ದು, ಪತ್ನಿಯ ಒಡವೆಗಳನ್ನು ಅಡವಿಟ್ಟಿದ್ದ. ಬಂಗಾರ ಯಾವಾಗ ಬಿಡಿಸಿಕೊಂಡು ಬರೋದು ಎನ್ನುವ ವಿಷಯಕ್ಕೆ ಮನೆಯಲ್ಲಿ ಸದಾ ಗಲಾಟೆ, ಜಗಳ ಆಗುತ್ತಿತ್ತು.
ಮಸಬ್ಬಿ ತನ್ನ ಸಹೋದರನ ಬಳಿ ಸ್ವಲ್ಪ ಸಾಲ ಪಡೆದಿದ್ದಾಳೆ, ಇನ್ನಷ್ಟು ಸಾಲ ಕೇಳು ಎಂದು ಇರ್ಫಾನ್ ಹೇಳಿದ್ದಾನೆ. ಇದಕ್ಕೆ ಒಪ್ಪದ ಮಸಬ್ಬಿ ನೀವು ಸಾಲ ತಂದ ಹಣವೆಲ್ಲ ಎಲ್ಲಿಗೆ ಹೋಯ್ತು ಎಂದು ಗರಂ ಆಗಿದ್ದಾರೆ. ಅಂತೆಯೇ ಜಗಳ ತಾರಕಕ್ಕೆ ಏರಿದೆ. ಸಿಟ್ಟಿನಲ್ಲಿ ಇರ್ಫಾನ್ ಚಾಕುವಿನಿಂದ ಪತ್ನಿಯ ಕತ್ತು ಸೀಳಿದ್ದಾನೆ.
ಮಾಸಬ್ಬಿ ಕುತ್ತಿಗೆಗೆ ಕೈ ಅಡ್ಡ ಹಿಡಿದುಕೊಂಡು ಮನೆಯಿಂದ ಹೊರಗೆ ಬಂದು ಬಿದ್ದಿದ್ದಾರೆ. ನನ್ನನ್ನು ಉಳಿಸಿ ಎಂದು ಅಂಗಲಾಚಿದ್ದಾರೆ. ಆದರೆ ಪಾಪಿ ಪತಿ ಕರುಣೆಯೇ ಇಲ್ಲದಂತೆ ಮತ್ತೆ ಆಕೆಗೆ ಚಾಕು ಇರಿದು ಸಾಯಿಸಿದ್ದಾನೆ. ಮಕ್ಕಳು ತಾಯಿಯ ಮೃತದೇಹ ನೋಡಿ ಕಣ್ಣೀರಿಟ್ಟಿದ್ದಾರೆ.
ತಾಯಿ ಸತ್ತು ಹೋಗಿದ್ದು, ತಂದೆ ಜೈಲಿಗೆ ಹೋಗಲಿದ್ದು, ಪೋಷಕರನ್ನು ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಆರೋಪಿ ತಾನೇ ಠಾಣೆಗೆ ಬಂದು ಶರಣಾಗಿದ್ದಾನೆ.



