ಹೊಸದಿಗಂತ ಬಾಗಲಕೋಟೆ:
ನಗರದ ಮುಚಖಂಡಿ ಕ್ರಾಸ್ ಸಮೀಪ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದರಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಲೋಕಾಪುರ ಹೊಸಕೋಟಿಯಿಂದ ಕಮತಗಿ ಸಮೀಪದ ಮೆಲಬೋರ್ ಸಕ್ಕರೆ ಕಾರ್ಖಾನೆಗೆ ಎರಡು ಟ್ರ್ಯಾಲಿಗಳಲ್ಲಿ ಕಬ್ಬನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಮುಚಖಂಡಿ ಕ್ರಾಸ್ ಬಳಿ ಟಂಟಂ ವಾಹನವೊಂದನ್ನು ಓವರ್ಟೇಕ್ ಮಾಡಲು ಹೋದಾಗ, ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ವಿಭಜಕಕ್ಕೆ ಗುದ್ದಿ ಪಲ್ಟಿಯಾಗಿದೆ.
ಅಪಘಾತದ ತೀವ್ರತೆಗೆ ಕಬ್ಬು ತುಂಬಿದ್ದ ಒಂದು ಟ್ರ್ಯಾಲಿ ರಸ್ತೆಯಲ್ಲೇ ಉರುಳಿದರೆ, ಮತ್ತೊಂದು ಟ್ರ್ಯಾಲಿ ಸುಮಾರು ನೂರು ಅಡಿ ದೂರಕ್ಕೆ ಸಾಗಿ ಸಮೀಪದ ಮನೆಯೊಂದರ ಮೇಲ್ಛಾವಣಿಯ ಮೇಲೆ ಪಲ್ಟಿಯಾಗಿದೆ. ಈ ಮನೆಯ ಪಕ್ಕದಲ್ಲೇ ಮತ್ತೊಂದು ಕುಟುಂಬ ವಾಸವಾಗಿದ್ದು, ಗಿರಣಿ ಇರುವ ಜಾಗಕ್ಕೆ ಟ್ರ್ಯಾಲಿ ಬಿದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಚಾಲಕ ಮತ್ತು ಸಾರ್ವಜನಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.



