ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಮೆಂಟ್ನಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಪಂದ್ಯವನ್ನು ಆಡಲು ನಿರಾಕರಿಸಿತು. ತಂಡದ ಈ ನಿರ್ಧಾರಕ್ಕೆ ಪಾಕ್ ತಂಡದ ಆಟಗಾರರು ಆಕ್ರೋಶ ಹೊರಹಾಕಿದ್ದರು. ಇದೀಗ ಅಂತಹದ್ದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಲಾಗಿದೆ. ಇದಕ್ಕೆ ಇಂಡಿಯಾ ತಂಡದ ಆಟಗಾರ ಶಿಖರ್ ಧವನ್ ಕೂಡ ಖಡಕ್ ಉತ್ತರ ನೀಡಿದ್ದಾರೆ.
ಈ ಟೂರ್ನಮೆಂಟ್ನ ಲೀಗ್ ಸುತ್ತಿನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಪರಸ್ಪರ ಆಡಬೇಕಿತ್ತು. ಆದರೆ ಪಂದ್ಯಕ್ಕೆ 12 ಗಂಟೆಗಳ ಮೊದಲು ಭಾರತೀಯ ಆಟಗಾರರು ಪಾಕ್ ವಿರುದ್ಧ ಆಡಲು ನಿರಾಕರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಇದೀಗ ಮುಂದಿನ ಸುತ್ತಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮತ್ತೆ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ಈ ಪಂದ್ಯದ ಕುರಿತು ಪತ್ರಕರ್ತರೊಬ್ಬರು ಇಂಡಿಯಾ ಚಾಂಪಿಯನ್ಸ್ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಬಳಿ ಈ ಪ್ರಶ್ನೆ ಕೇಳಿದ್ದಾರೆ.
ಪಾಕಿಸ್ತಾನಿ ಪತ್ರಕರ್ತರೊಬ್ಬರು ಸೆಮಿಫೈನಲ್ನಲ್ಲಿ ಪಾಕಿಸ್ತಾನ ತಂಡ ಭಾರತ ಎದುರಾದರೆ ಆ ಪಂದ್ಯವನ್ನು ನೀವು ಆಡುವುದಿಲ್ಲವಾ ಎಂದು ಧವನ್ಗೆ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರವಾಗಿ ಧವನ್,‘ಅಣ್ಣ, ಈ ಪ್ರಶ್ನೆ ಕೇಳಲು ಇದು ಸರಿಯಾದ ಜಾಗವಲ್ಲ. ಆದಾಗ್ಯೂ ನೀವು ಈ ಪ್ರಶ್ನೆಯನ್ನು ಕೇಳುವುದರಿಂದ ನಾನು ಒತ್ತಡಕ್ಕೆ ಸಿಲುಕಿ ಏನಾದರೂ ಹೇಳುತ್ತೇನೆ ಎಂದು ನೀವು ಭಾವಿಸುತ್ತೀರಿ. ಆದರೆ ನಾನು ಆ ರೀತಿಯಾಗಿ ಏನನ್ನು ಹೇಳುವುದಿಲ್ಲ. ನೀವು ಈ ಪ್ರಶ್ನೆಯನ್ನು ಕೇಳಬಾರದಿತ್ತು. ಆದರೂ ಹೇಳುತ್ತೀನಿ ಕೇಳಿ, ನಾವು ಮೊದಲು ಆಡಿಲ್ಲವೆಂದಾಗ, ಈಗಲೂ ಆಡುವುದಿಲ್ಲ ಎಂದಿದ್ದಾರೆ.
https://x.com/ahtashamriaz22/status/1949198630239531256
ಇಂಡಿಯಾ ಚಾಂಪಿಯನ್ಸ್ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಹಾಲಿ ಚಾಂಪಿಯನ್ ಆಗಿರುವ ಇಂಡಿಯಾ ಟೂರ್ನಿಯಿಂದ ಹೊರಬೀಳುವ ಆತಂಕದಲ್ಲಿದೆ.