‘ಆಪರೇಷನ್‌ ಸಿಂದೂರ್’ ನಲ್ಲಿ ಭಾರತದ ಗೆಲುವನ್ನು ಪಾಕ್ ನಾಗರಿಕನೂ ಒಪ್ಪುತ್ತಾನೆ: ಭೂಸೇನಾ ಮುಖ್ಯಸ್ಥರಿಂದ ಖಡಕ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್‌ ಸಿಂದೂರ್ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಜಯದ ಸುಳ್ಳು ನರೇಟಿವ್‌ ಹರಡುತ್ತಿರುವ ಪಾಕ್‌ ಸೇನೆಯನ್ನು, ಭಾರತದ ಭೂಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಐಐಟಿ ಮದ್ರಾಸ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಜನರಲ್‌ ಉಪೇಂದ್ರ ದ್ವಿವೇದಿ , ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಗೆಲುವು ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನ ಸೇನೆ, ಸುಳ್ಳನ್ನು ಹೇಗೆ, ಎಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ಹೇಳಬೇಕು ಎಂಬುದು ಅದಕ್ಕೆ ಗೊತ್ತಿರಬೇಕು. ಏಕೆಂದರೆ ಆಪರೇಷನ್‌ ಸಿಂದೂರ ಸೇನಾ ಕಾರ್ಯಾಚರಣೆಯಲ್ಲಿ, ಭಾರತದ ಗೆಲುವನ್ನು ಪಾಕಿಸ್ತಾನಿ ನಾಗರಿಕ ಕೂಡ ಒಪ್ಪಿಕೊಳ್ಳುತ್ತಾನೆ ಎಂದು ಜನರಲ್‌ ಉಪೇಂದ್ರ ದ್ವಿವೇದಿ ಅವರು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.

ಆಪರೇಷನ್‌ ಸಿಂದೂರ ಸೇನಾ ಕಾರ್ಯಾಚರಣೆಯಲ್ಲಿ ಯಾರ ಗೆಲುವಾಗಿದೆ ಎಂದು ಓರ್ವ ಪಾಕಿಸ್ತಾನಿಯನ್ನು ಕೇಳಿನೋಡಿ. ಆತ ಒಂದು ನಿಮಿಷವೂ ತಡಮಾಡದೇ ಭಾರತ ಗೆದ್ದಿದೆ ಎಂದು ಹೇಳುತ್ತಾನೆ. ಆದರೆ ಪಾಕಿಸ್ತಾನ ಸೇನೆ ಮಾತ್ರ ಗೆಲುವು ತನ್ನದೇ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ ಎಂದು ಜನರಲ್‌ ದ್ವಿವೇದಿ ವ್ಯಂಗ್ಯವಾಡಿದರು.

ಕೆಲವು ಪಾಕಿಸ್ತಾನಿಯರು ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನೆ ಗೆದ್ದಿದೆ ಎಂದು ನಂಬುತ್ತಾರೆ. ಏಕೆಂದರೆ ಪಾಕ್‌ ಸರ್ಕಾರ ತನ್ನ ಭೂಸೇನಾ ಮುಖ್ಯಸ್ಥ ಜನರಲ್‌ ಅಸೀಮ್‌ ಮುನೀರ್‌ ಅವರಿಗೆ ಫೀಲ್ಡ್‌ ಮಾರ್ಷಲ್‌ ಆಗಿ ಬಡ್ತಿ ನೀಡಿದೆ. ಅಸೀಮ್‌ ಮುನೀರ್‌ ಫೀಲ್ಡ್‌ ಮಾರ್ಷಲ್‌ ಆಗಿದ್ದಾರೆ ಎಂದ ಮೇಲೆ ಪಾಕ್‌ ಸೇನೆ ಯುದ್ಧ ಗೆದ್ದಿರಬೇಕು ಎಂದು ಕೆಲವು ಮುಗ್ಧ ಪಾಕಿಸ್ತಾನಿಯರು ನಂಬುತ್ತಾರೆ ಎಂದು ಜನರಲ್‌ ದ್ವಿವೇದಿ ಹೇಳಿದರು.

ಆಪರೇಷನ್‌ ಸಿಂಧೂರ ಸೇನಾ ಕಾರ್ಯಾಚರಣೆ ವೇಳೆ ಸೇನಾ ಪಡೆಗಳಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿತ್ತು. ಇದರಿಂದ ನಮಗೆ ಕಾರ್ಯಾಚರಣೆಯ ವ್ಯೂಹತಂತ್ರವನ್ನು ಹೆಣೆಯಲು ಸುಲಭವಾಯಿತು. ಅದರಂತೆ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿದ್ದ 9 ಭಯೋತ್ಪಾದಕ ನೆಲೆಗಳನ್ನು ನಾವು ಹೊಡೆದುರುಳಿಸಲು ಸಾಧ್ಯವಾಯಿತು. ಇದರ ಫಲಿತಾಂಶ ಏನು ಎಂಬುದನ್ನು ನಾವು ಈಗಾಗಲೇ ದೇಶದ ಮುಂದೆ ಇಟ್ಟಿದ್ದೇವೆ ಎಂದು ಭಾರತೀಯ ಭೂಸೇನಾ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!