ಹೊಸದಿಗಂತ ವರದಿ ವಿಜಯಪುರ:
ವಿಜಯಪುರ ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನೇ ಗುರಿಯಾಗಿಸಿ ಸರಗಳ್ಳತನ ಮಾಡುವ ದುಷ್ಕರ್ಮಿಗಳ ಕೃತ್ಯ ನಡೆಯುತ್ತಿದ್ದು, ಜನರು ಆತಂಕಗೊಳ್ಳುವಂತಾಗಿದೆ.
ಶಕ್ತಿಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಂಡಿದೆ. ಅದರಲ್ಲೂ ಪ್ರಯಾಣಿಕರು ಬಸ್ ಸೀಟು ಹಿಡಿಯುವ ಧಾವಂತವನ್ನೇ ಕಳ್ಳ, ಖದೀಮರು ತಮ್ಮ ಬಂಡವಾಳ ಮಾಡಿಕೊಂಡಿದ್ದು, ಮಹಿಳೆಯರ ಕೊರಳಲ್ಲಿನ ಚಿನ್ನಾಭರಣದ ಸರಗಳನ್ನು ಖದೀಮರು ಎಗರಿಸಿ ಪರಾರಿಯಾಗುತ್ತಿದ್ದಾರೆ.
ಇದನ್ನೂ ಓದಿ:
ಜಿಲ್ಲೆಯ ಇಂಡಿ ಹಾಗೂ ಆಲಮೇಲ ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್ ಸೀಟು ಹಿಡಿಯಲು ಬಸ್ ಬಳಿ ತೆರಳುತ್ತಿದ್ದಂತೆ, ಬೈಕ್ ನಲ್ಲಿ ಬಂದ ಇಬ್ಬರು ಆಗಂತುಕರು ಮಹಿಳೆಯ ಕೊರಳಲ್ಲಿನ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಖದೀಮರ ದುಷ್ಕೃತ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇಂಡಿ ಶಹರ ಹಾಗೂ ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



