ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ ನಗರದಲ್ಲಿ ಸಾತ್ವಿಕ ವಾತಾವರಣ ಕಾಪಾಡಲು ಮೈಸೂರು ಮಹಾನಗರ ಪಾಲಿಕೆ ಮಹತ್ವದ ಕ್ರಮ ಕೈಗೊಂಡಿದೆ. ಫೆಬ್ರವರಿ 15ರಂದು ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮಾಂಸ ಮಾರಾಟ ನಡೆಯದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಪಾಲಿಕೆ ಪ್ರಕಟಣೆ ಪ್ರಕಾರ, ಕುರಿ, ಮೇಕೆ, ಕೋಳಿ, ಹಂದಿ ಮಾಂಸ ಹಾಗೂ ಮೀನು ಸೇರಿದಂತೆ ಎಲ್ಲಾ ಮಾಂಸ ವ್ಯಾಪಾರವನ್ನು ಆ ದಿನ ನಿಷೇಧಿಸಲಾಗಿದೆ. ಪಾಲಿಕೆಗೆ ಸೇರಿದ ಕಸಾಯಿಖಾನೆಗಳ ಜೊತೆಗೆ ಖಾಸಗಿ ಮಾಂಸದ ಅಂಗಡಿಗಳನ್ನೂ ಮುಚ್ಚುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:
ಹಬ್ಬದಂದು ಭಕ್ತರು ಉಪವಾಸ, ಪೂಜೆ ಮತ್ತು ಜಾಗರಣೆಯಲ್ಲಿ ತೊಡಗಿರುವುದರಿಂದ ಅವರ ಭಾವನೆಗಳಿಗೆ ಗೌರವ ಸೂಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದೇಶ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದ್ದು, ನಿಯಮ ಪಾಲಿಸದ ಅಂಗಡಿಗಳಿಗೆ ದಂಡ ವಿಧಿಸುವುದರ ಜೊತೆಗೆ ತಾತ್ಕಾಲಿಕವಾಗಿ ಸೀಲ್ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.



