ಹೊಸ ದಿಗಂತ ವರದಿ,ಯಲ್ಲಾಪುರ :
ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಗ್ರಾಮದೇವಿ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ಜಾತ್ರಾಪೂರ್ವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಆರಂಭಗೊಂಡವು.
ವಾರದ ಹಿಂದೆ ಜಾತ್ರಾಪೂರ್ವದ ಧಾರ್ಮಿಕ ಆಚರಣೆಯಾದ ಅಂಕೆ ಹಾಕುವುದು, ಹೊರ ಮಂಗಳವಾರ ಮುಂತಾದ ಆಚರಣೆಯ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಗ್ರಾಮದೇವಿಯರಿಗೆ ಕಲಾಸಂಕೋಚಮಾಡಿ, ಕುಂಭದಲ್ಲಿ ಪ್ರಾಣಪ್ರತಿಷ್ಠೆ ಮಾಡಿ ವಿವಿಧ ಸಂಪ್ರದಾಯಗಳನ್ನು ಮಾಡಿ ದೇವಾಲಯದ ಬಾಗಿಲನ್ನು ಮುಚ್ಚಲಾಗಿತ್ತು.
ಜಾತ್ರಾ ಆರಂಭದ ಮುನ್ನಾದಿನವಾದ ಮಂಗಳವಾರ ದೇವಾಲಯದಲ್ಲಿ ವಿದ್ಯುಕ್ತವಾಗಿ ಗ್ರಾಮದೇವಿಯರನ್ನು ಪ್ರತಿಷ್ಠಾಪಿಸಿ, ಹೂವಿನ ಅಲಂಕಾರ, ಆಭರಣಗಳ ಅಲಂಕಾರ ಸಹಿತವಾಗಿ ಸರ್ವಾಲಂಕಾರ ಮಾಡಿ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.
ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ರಾಜೇಂದ್ರಪ್ರಸಾದ ಭಟ್ ದಂಪತಿ ಹಾಗೂ ಆಯಗಾರ ಕುಟುಂಬದ ಮನೋಹರ ಹೆಗಡೆ ದಂಪತಿ ಗ್ರಾಮದೇವಿಯರಿಗೆ ಪೂಜೆ ಸಲ್ಲಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.



