ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ರೋಹಿಣಿ ಪ್ರದೇಶದ ಸೆಕ್ಟರ್ 32ರಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ರಸ್ತೆಗುಂಡಿಗೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ ಕೇವಲ ಐದೇ ದಿನಗಳಲ್ಲಿ, ಈಗ ತೆರೆದ ಮ್ಯಾನ್ಹೋಲ್ಗೆ ಬಿದ್ದು ಬಿಹಾರ ಮೂಲದ ಕಾರ್ಮಿಕನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ.
ಬಿಹಾರದ ಸಮಸ್ತಿಪುರ ಜಿಲ್ಲೆಯ ಬಿರ್ಜು ಕುಮಾರ್ ರೈ ಸೋಮವಾರ ಸಂಜೆ ಬೇಗಂಪುರ ಪ್ರದೇಶದ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿ ತನ್ನ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರು ರಸ್ತೆಯಲ್ಲಿದ್ದ ತೆರೆದ ಒಳಚರಂಡಿ ಮ್ಯಾನ್ಹೋಲ್ಗೆ ಬಿದ್ದಿದ್ದಾರೆ. ಮುನ್ನೆಡೆಯುತ್ತಿದ್ದ ಸ್ನೇಹಿತನಿಗೆ ಈ ವಿಚಾರ ತಕ್ಷಣಕ್ಕೆ ತಿಳಿಯದ ಕಾರಣ, ಮಂಗಳವಾರವಷ್ಟೇ ಬಿರ್ಜು ಮೃತದೇಹ ಪತ್ತೆಯಾದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಕಳೆದ ತಿಂಗಳು ನೆರೆಯ ನೋಯ್ಡಾದಲ್ಲೂ ಇಂತಹದ್ದೇ ಮನಕಲಕುವ ಘಟನೆ ನಡೆದಿತ್ತು. 27 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಅವರು ದಟ್ಟ ಮಂಜಿನಿಂದಾಗಿ ದಾರಿ ಕಾಣದೆ ತಮ್ಮ ಕಾರಿನೊಂದಿಗೆ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದರು. ಸೆಕ್ಟರ್ 150ರ ಅವರ ಅಪಾರ್ಟ್ಮೆಂಟ್ ಬಳಿಯೇ ಈ ಅವಘಡ ಸಂಭವಿಸಿತ್ತು.
ಇದನ್ನೂ ಓದಿ:
ನಗರದ ರಸ್ತೆ ಸುರಕ್ಷತೆ ಮತ್ತು ತೆರೆದ ಮ್ಯಾನ್ಹೋಲ್ಗಳ ಬಗ್ಗೆ ಸಾರ್ವಜನಿಕರಲ್ಲಿ ಈಗ ಭೀತಿ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಸರಣಿ ಸಾವುಗಳಿಗೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.



