ಹೊಸದಿಗಂತ ಡಿಜಿಟಲ್:
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಅವರಲ್ಲಿ ಛತ್ತೀಸ್ಗಢದ ದೀಪಕ್ ರಾತ್ರೆ ಕೂಡ ಒಬ್ಬರು. ದಾಳಿ ವೇಳೆ ಉಗ್ರರು ಮೊದಲು ಸಂತ್ರಸ್ತನ ಧರ್ಮದ ಬಗ್ಗೆ ಪ್ರಶ್ನಿಸಿ ಬಳಿಕ ಗುಂಡು ಹಾರಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಆದರೆ ಈ ಆರೋಪವನ್ನು ತನಿಖೆ ನಡೆಸುತ್ತಿರುವ ಭದ್ರತಾ ಸಂಸ್ಥೆಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
ಕುಟುಂಬಕ್ಕೆ ಆಸರೆಯಾಗಿದ್ದ ದೀಪಕ್
ಉತ್ತಮ ಜೀವನೋಪಾಯಕ್ಕಾಗಿ ದೀಪಕ್ ಕೆಲವು ತಿಂಗಳ ಹಿಂದೆ ಪತ್ನಿಯೊಂದಿಗೆ ಕಾಶ್ಮೀರಕ್ಕೆ ತೆರಳಿದ್ದರು. ಕುಟುಂಬದ ಪ್ರಮುಖ ಆಧಾರವಾಗಿದ್ದ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ವೃದ್ಧ ತಾಯಿ, ಪತ್ನಿ ಹಾಗೂ ಇತರ ಕುಟುಂಬ ಸದಸ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಬ್ಬ ಮೃತ ಕಾರ್ಮಿಕ ಭೂಪೇಂದ್ರ ಭೈನಾ ಕೂಡ ಛತ್ತೀಸ್ಗಢ ಮೂಲದವರಾಗಿದ್ದು, ಕೆಲವೇ ತಿಂಗಳ ಹಿಂದೆ ಉದ್ಯೋಗಕ್ಕಾಗಿ ಕಾಶ್ಮೀರಕ್ಕೆ ಬಂದಿದ್ದರು.
ಇದನ್ನೂ ಓದಿ:
ಪರಿಹಾರ ಘೋಷಣೆ, ತನಿಖೆ ಮುಂದುವರಿಕೆ
ಘಟನೆಯ ಬಳಿಕ ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ದಾಳಿಯನ್ನು ತೀವ್ರವಾಗಿ ಖಂಡಿಸಿ, ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮೃತದೇಹಗಳನ್ನು ತವರಿಗೆ ತರಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಪ್ರಕರಣದ ಕುರಿತು ಭದ್ರತಾ ಪಡೆಗಳು ಸಮಗ್ರ ತನಿಖೆ ಮುಂದುವರಿಸಿವೆ.



