ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ನ 15ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ವೆಸ್ಟ್ ಇಂಡೀಸ್ ವಿರುದ್ಧ 30 ರನ್ಗಳ ಹೀನಾಯ ಸೋಲನ್ನು ಅನುಭವಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್, ಕೆರಿಬಿಯನ್ ಶೈಲಿಯ ಸ್ಫೋಟಕ ಆಟದ ಮೂಲಕ ನಿಗದಿತ 20 ಓವರ್ಗಳಲ್ಲಿ 196 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು.
197 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ವಿಂಡೀಸ್ ಬೌಲರ್ಗಳು ಸಿಂಹಸ್ವಪ್ನವಾದರು. ಅಂತಿಮವಾಗಿ 19 ಓವರ್ಗಳಲ್ಲಿ ಕೇವಲ 166 ರನ್ಗಳಿಗೆ ಆಲೌಟ್ ಆಗುವ ಮೂಲಕ ಆಂಗ್ಲ ಪಡೆ ಪರಾಜಯಗೊಂಡಿತು.
ಸೋಲಿನ ಬಳಿಕ ಮಾತನಾಡಿದ ಇಂಗ್ಲೆಂಡ್ ತಂಡದ ಸಾರಥಿ ಹ್ಯಾರಿ ಬ್ರೂಕ್ ತಮ್ಮ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ವೆಸ್ಟ್ ಇಂಡೀಸ್ ತಂಡವು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅದ್ಭುತವಾಗಿ ಆಡಿತು. ಅವರಿಗೆ ಮೈದಾನದ ಅರಿವಿತ್ತು, ಹೀಗಾಗಿಯೇ ಅವರು ಸಿಕ್ಸರ್ಗಳ ಸುರಿಮಳೆಗೈದರು. ಆದರೆ ನಮ್ಮ ಅಗ್ರ ಕ್ರಮಾಂಕದ ಬ್ಯಾಟರ್ಗಳು ನಿರೀಕ್ಷಿತ ವೇಗದಲ್ಲಿ ರನ್ ಗಳಿಸಲು ವಿಫಲರಾದರು,” ಎಂದು ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿದರು.
ತಂಡದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ ಬ್ರೂಕ್, “ನೇಪಾಳ ವಿರುದ್ಧ ನಾವು ಕೇವಲ 4 ರನ್ಗಳಿಂದ ರೋಚಕ ಜಯ ಸಾಧಿಸಿದ್ದೆವು. ಆ ಗೆಲುವಿಗಾಗಿ ದೇವರಿಗೆ ಧನ್ಯವಾದ ಅರ್ಪಿಸಬೇಕು. ಒಂದು ವೇಳೆ ಆ ಪಂದ್ಯವನ್ನು ಸೋತಿದ್ದರೆ ನಾವು ಇಂದು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿರುತ್ತಿದ್ದೆವು,” ಎಂದು ಹಳೆಯ ಪಂದ್ಯವನ್ನು ನೆನಪಿಸಿಕೊಂಡರು.
ಸದ್ಯ ಒಂದು ಗೆಲುವನ್ನು ಖಾತೆಯಲ್ಲಿ ಹೊಂದಿರುವ ಇಂಗ್ಲೆಂಡ್ ತಂಡಕ್ಕೆ ಮುಂದಿನ ಪಂದ್ಯಗಳು ನಿರ್ಣಾಯಕವಾಗಿವೆ. ಸ್ಕಾಟ್ಲೆಂಡ್ ಮತ್ತು ಇಟಲಿ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರುವ ವಿಶ್ವಾಸವನ್ನು ನಾಯಕ ಹ್ಯಾರಿ ಬ್ರೂಕ್ ವ್ಯಕ್ತಪಡಿಸಿದ್ದಾರೆ.



