ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠದ ಆದೇಶವನ್ನು ಪ್ರಶ್ನಿಸಿ ಪೂಜೆಗೆ ತಡೆ ನೀಡುವಂತೆ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾ ಕಮಿಟಿಯೂ ಸಲ್ಲಿಸಿದ ರಿಟ್ ಅರ್ಜಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸುವ ಮೂಲಕ ಕಲಬುರಗಿ ವಿಭಾಗೀಯ ಹೈಕೋರ್ಟ್ ಪೀಠದ ತೀರ್ಪನ್ನು ಎತ್ತಿಹಿಡಿದಿದೆ.
ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ 400 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ರಾಘವ ಚೈತನ್ಯರ ಸಮಾಧಿಯ ಮೇಲಿನ ಶಿವಲಿಂಗಕ್ಕೆ ಫೆ.15 ಶಿವರಾತ್ರಿಯ ದಿನದಂದು ಪೂಜೆ ಸಲ್ಲಿಸಲು ಅನುಮತಿ ನೀಡುವಂತೆ ಹಿಂದು ಮುಖಂಡ ಸಿದ್ದರಾಮಯ್ಯ ಹಿರೇಮಠ ಕಲಬುರಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು,ಅರ್ಜಿಯನ್ನು ಆಲಿಸಿ ಫೆ.11ರಂದೆ ಅರ್ಜಿದಾರರಿಗೆ ಮಾತ್ರ ಅವಕಾಶ ನೀಡಿ,ಮಧ್ಯಾಹ್ನ2 ಗಂಟೆಯಿಂದ ಸಾಯಂಕಾಲ 6 ಗಂಟೆ ಒಳಗಾಗಿ ಪೂಜೆ ಸಲ್ಲಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದರ್ಗಾ ಕಮಿಟಿಯ ಕಾರ್ಯದರ್ಶಿ ಖಲೀಲ್ ಅನ್ಸಾರಿ ಪೂಜೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.ಆದರೆ, ಸುಪ್ರೀಂ ಕೋರ್ಟ್ ದರ್ಗಾ ಕಮಿಟಿ ಅರ್ಜಿಯನ್ನು ತಿರಸ್ಕರಿಸಿ,ಶಿವಲಿಂಗ ಪೂಜೆಗೆ ಅನುಮತಿ ನೀಡುವ ಮೂಲಕ, ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದು,ಪೂಜೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಇದ್ಯಾಗಿಯೂ ಸುಪ್ರೀಂ ಕೋರ್ಟ್,ಸಂವಿಧಾನದ 32ನೇ ವಿಧಿ ಇಂತಹ ಉದ್ದೇಶಗಳಿಗೆ ಇರುವುದಿಲ್ಲ. ಈಗಾಗಲೇ ಹೈಕೋರ್ಟ್ ಈ ಕುರಿತು ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಪೂಜೆಗೆ ಅವಕಾಶ ನೀಡಿ ಆದೇಶಿಸಿದ್ದು, ಇದನ್ನು ಪ್ರಶ್ನಿಸಿ ಪುನಃ ಅರ್ಜಿ ಸಲ್ಲಿಸುವುದು ಸೂಕ್ತ ಅಲ್ಲ ಎಂದು ಅರ್ಜಿದಾರರ ಪರ ಬೇಸರ ವ್ಯಕ್ತಪಡಿಸಿದ್ದು, ಇದೀಗ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಫೆ.15 ರಂದು ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶಿವಲಿಂಗಕ್ಕೆ ಮಹಾಶಿವರಾತ್ರಿಯಂದು ಪೂಜೆ ನಡೆಸಲು ಇದ್ದ ಕಾನೂನು ಅಡೆತಡೆಗಳನ್ನು ನಿವಾರಣೆ ಮಾಡಿದೆ.



