ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಡಂಚಿನ ಗ್ರಾಮಗಳಲ್ಲಿ ದಾಂಧಲೆ ನಡೆಸಿ, ಜನರ ಜೀವನ ಹೈರಾಣು ಮಾಡಿ, ಆದಿವಾಸಿಯನ್ನು ಕೊಂದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಮೊಳೆಯೂರು ವಲಯ ಅರಣ್ಯ ಪ್ರದೇಶದಲ್ಲಿ ಕಾಡಾನೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. 35 ವರ್ಷದ ಗಂಡಾನೆ ಹಾಡಿ ನಿವಾಸಿ ಮಾದ ಎನ್ನುವವರನ್ನು ಬಲಿ ಪಡೆದಿತ್ತು. ಇದೆಲ್ಲದರಿಂದ ರೋಸಿ ಹೋಗಿದ್ದ ಜನ ಆನೆ ಹಿಡಿಯುವಂತೆ ಆಗ್ರಹಿಸಿದ್ದರು.
ರೈಲ್ವೆ ಕಂಬಿ ಮುರಿದು ಕಾಡಿನಿಂದ ಹೊರ ಬಂದ ಕಾಡಾನೆ ಸೆರೆ ಹಿಡಿಯಲು ಮುಂದಾದ ಅಧಿಕಾರಿಗಳು ಆನೆ ಇರುವಿಕೆಯ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಆನೆ ಸೆರೆ ಹಿಡಿಯಲು ಮುಂದಾದರು. ಕಾಡಾನೆ ಮಠದಕಟ್ಟೆ, ಕಾಟವಾಳು ಗ್ರಾಮದ ಜಮೀನಿನಲ್ಲಿದ್ದಾಗ ಸಾಕಾನೆಗಳಾದ ದುಬಾರಿಯ ಏಕಲವ್ಯ, ಸುಗ್ರೀವ, ಪ್ರಶಾಂತ, ಅಯ್ಯಪ್ಪ ಆನೆಗಳ ಸಹಾಯದಿಂದ ಅರವಳಿಕೆ ಚುಚ್ಚುಮದ್ದು ನೀಡಿ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಾಡಾನೆಯನ್ನು ರಾಮಪುರ ಸಾಕಾನೆ ಶಿಬಿರಕ್ಕೆ ಬಿಡಲಾಗಿದೆ.



