ಹೊಸದಿಗಂತ ಹುಬ್ಬಳ್ಳಿ:
ಉತ್ತರ ಕರ್ನಾಟಕದ ಆಧ್ಯಾತ್ಮಿಕ ಕೇಂದ್ರವಾದ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಸೋಮವಾರ ಸಂಜೆ ಮಹಾ ರಥೋತ್ಸವವು ಅತ್ಯಂತ ವೈಭವದಿಂದ ಜರುಗಿತು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅಜ್ಜನ ರಥವು ಸಾಗುತ್ತಿದ್ದರೆ, ಇಡೀ ನಗರವೇ ಭಕ್ತಿ ಸಾಗರದಲ್ಲಿ ಮುಳುಗಿದಂತಿತ್ತು.
ಸಂಜೆ 5:30ಕ್ಕೆ ಸಿದ್ಧಾರೂಢರು ಮತ್ತು ಗುರುನಾಥಾರೂಢರ ಪಲ್ಲಕ್ಕಿಗಳು ಮಠದ ಆವರಣಕ್ಕೆ ಆಗಮಿಸುತ್ತಿದ್ದಂತೆ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು.
ಮಠದ ಆವರಣದಿಂದ ಆರಂಭಗೊಂಡ ರಥವು ಕಾರವಾರ ರಸ್ತೆಯ ಪ್ರವೇಶ ಗೋಪುರದವರೆಗೆ ಸಾಗಿ, ನಂತರ ಮರಳಿ ಮಠದ ಪ್ರಾಂಗಣವನ್ನು ತಲುಪಿತು.
ಈ ಪವಿತ್ರ ಕಾರ್ಯಕ್ರಮದಲ್ಲಿ ಮಠದ ಆಡಳಿತಾಧಿಕಾರಿ ಬಿ.ಎಸ್. ಭಾರತಿ, ಚೇರಮನ್ ಚನ್ನವೀರ ಮುಂಗರವಾಡಿ ಸೇರಿದಂತೆ ಪದಾಧಿಕಾರಿಗಳಾದ ವಿನಾಯಕ ಘೋಡಕೆ, ರಮೇಶ ಬೆಳಗಾವಿ ಹಾಗೂ ಮಂಜುನಾಥ ಮುನವಳ್ಳಿ ಮುಂತಾದವರು ಪಾಲ್ಗೊಂಡಿದ್ದರು.
ರಥ ಸಾಗುವ ಹಾದಿಯುದ್ದಕ್ಕೂ ಭಕ್ತರು ಬಾಳೆಹಣ್ಣು-ಉತ್ತತ್ತಿ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಈ ವೇಳೆ ಮೊಳಗಿದ ಘೋಷಣೆಗಳು ಹೀಗಿದ್ದವು:
“ಸಿದ್ಧಾರೂಢರ ಅಂಗಾರ, ದೇಶಕ್ಕೆಲ್ಲ ಬಂಗಾರ!”
“ಸಿದ್ಧಾರೂಢರ ಜೋಳಿಗೆ, ನಾಡಿಗೆಲ್ಲ ಹೋಳಿಗೆ!”
“ಓಂ ನಮಃ ಶಿವಾಯ… ಸಿದ್ಧಾರೂಢ ಮಹಾರಾಜ್ ಕಿ ಜೈ!”



