ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC ಮತ್ತು KKRTC ಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಈಗ ಅಧಿಕೃತವಾಗಿ ಬಹಿರಂಗವಾಗಿದೆ.
ಕೋವಿಡ್ ಸಮಯದಲ್ಲಿ ಮೃತಪಟ್ಟ ಸಿಬ್ಬಂದಿಗೆ ಪರಿಹಾರ ನೀಡುವ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, “ಸಿಬ್ಬಂದಿಗೆ ವೇತನ ನೀಡುವುದೇ ನಮಗೆ ಕಷ್ಟವಾಗಿದೆ” ಎಂದು ನಿಗಮಗಳ ಪರ ವಕೀಲರೇ ಹೈಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾರೆ.
ದಾವಣಗೆರೆಯ ತಾಹಿರ್ ಹುಸೇನ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ಪ್ರಕಾರ, ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಮೃತಪಟ್ಟ 323 ಸಾರಿಗೆ ಸಿಬ್ಬಂದಿಗಳಲ್ಲಿ ಕೇವಲ 7 ಕುಟುಂಬಗಳಿಗೆ ಮಾತ್ರ 30 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದ ಕುಟುಂಬಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂಬುದು ಅರ್ಜಿದಾರರ ಪ್ರಮುಖ ಆರೋಪವಾಗಿತ್ತು.
ಸಾರಿಗೆ ನಿಗಮಗಳ ಪರವಾಗಿ ವಾದ ಮಂಡಿಸಿದ ವಕೀಲರು ಆಘಾತಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ:
ಸದ್ಯದ ಪರಿಸ್ಥಿತಿಯಲ್ಲಿ ಸಾರಿಗೆ ನಿಗಮಗಳು ಭಾರೀ ನಷ್ಟ ಅನುಭವಿಸುತ್ತಿವೆ.
ಅಸ್ತಿತ್ವದಲ್ಲಿರುವ ಸಿಬ್ಬಂದಿಗೆ ತಿಂಗಳ ವೇತನ ಪಾವತಿಸುವುದೇ ದೊಡ್ಡ ಸವಾಲಾಗಿದೆ.
ಆರ್ಥಿಕ ಅಶಕ್ತತೆಯ ಕಾರಣದಿಂದಲೇ ಮೃತ ಸಿಬ್ಬಂದಿಯ ಪರಿಹಾರ ನಿರ್ಣಯ ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ.
ಈ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆಯಿಂದ ಸಾರಿಗೆ ನಿಗಮಗಳ ಮೇಲಾಗಿರುವ ಪರಿಣಾಮದ ಬಗ್ಗೆ ಗಂಭೀರವಾಗಿ ಪ್ರಶ್ನಿಸಿದೆ.
ಶಕ್ತಿ ಯೋಜನೆಯಡಿ ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿ ಹಣ ಎಷ್ಟು? ನಿಗಮಗಳಿಗೆ ಬರಬೇಕಾದ ಅನುದಾನದ ಸಂಪೂರ್ಣ ವಿವರಗಳನ್ನು ಮಾರ್ಚ್ 23ರೊಳಗೆ ಸಲ್ಲಿಸುವಂತೆ ಕೋರ್ಟ್ ಆದೇಶಿಸಿದೆ.
ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಯ ನಡುವೆ ಸಾರಿಗೆ ನಿಗಮಗಳು ಆಂತರಿಕವಾಗಿ ಪೊಳ್ಳಾಗಿವೆ ಎಂಬುದು ಈ ನ್ಯಾಯಾಲಯದ ಪ್ರಕ್ರಿಯೆಯಿಂದ ಸಾಬೀತಾದಂತಾಗಿದೆ.



