ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎದುರಾಗಿರುವ ಭೀಕರ ಮುಂಗಾರು ಮಳೆ ಕೊರತೆ ಮತ್ತು ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ನಿರ್ಧಾರ ಕೈಗೊಂಡಿದೆ. ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿಗಳ ಕಟ್ಟಡ ಸೇರಿದಂತೆ ರಾಜ್ಯ ಸಚಿವಾಲಯದ ಎಲ್ಲಾ ಕಚೇರಿಗಳಲ್ಲಿ ನೀರು ಮತ್ತು ವಿದ್ಯುತ್ ಅನ್ನು ಅತ್ಯಂತ ಮಿತವಾಗಿ ಬಳಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು (CS) ಕಠಿಣ ಆದೇಶ ಹೊರಡಿಸಿದ್ದಾರೆ.
ವಿದ್ಯುತ್ ಹಾಗೂ ಎಸಿ ಬಳಕೆಗೆ ಕಠಿಣ ನಿರ್ಬಂಧ
ಕಚೇರಿ ಅವಧಿ ಮುಗಿದ ತಕ್ಷಣವೇ ಎಲ್ಲಾ ದೀಪಗಳು ಮತ್ತು ಕಂಪ್ಯೂಟರ್ಗಳನ್ನು ಕಡ್ಡಾಯವಾಗಿ ಆಫ್ ಮಾಡಬೇಕು. ಅಧಿಕಾರಿಗಳು ತಮ್ಮ ಕೊಠಡಿಗಳಲ್ಲಿ ಇಲ್ಲದ ಅವಧಿಯಲ್ಲಿ ವಿದ್ಯುತ್ ಉಪಕರಣಗಳು ಚಾಲನೆಯಲ್ಲಿರಬಾರದು. ಕಚೇರಿಗಳಲ್ಲಿ ಎಸಿ ತಾಪಮಾನವನ್ನು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇರಿಸದಂತೆ ಸೂಚಿಸಲಾಗಿದೆ. ಅನಗತ್ಯವಾಗಿ ಎಸಿ ಬಳಸಿ ವಿದ್ಯುತ್ ವ್ಯಯಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ:
ನೀರು ಪೋಲು ಮಾಡಿದರೆ ಅಧಿಕಾರಿಗಳೇ ಹೊಣೆ!
ಸಚಿವಾಲಯದ ಶೌಚಾಲಯಗಳು, ಕೈ ತೊಳೆಯುವ ಜಾಗ ಹಾಗೂ ಕುಡಿಯುವ ನೀರಿನ ಘಟಕಗಳಲ್ಲಿ ನೀರು ಪೋಲಾಗದಂತೆ ನಿಗಾವಹಿಸಲು ಸೂಚಿಸಲಾಗಿದೆ. ಯಾವುದೇ ಪೈಪ್ ಅಥವಾ ನಲ್ಲಿಗಳಲ್ಲಿ ಸೋರಿಕೆ ಕಂಡುಬಂದಲ್ಲಿ ತಕ್ಷಣವೇ ಸರಿಪಡಿಸಬೇಕು. ಸರ್ಕಾರದ ಈ ಆದೇಶವನ್ನು ಉಲ್ಲಂಘಿಸಿ ನೀರು ಮತ್ತು ವಿದ್ಯುತ್ ಪೋಲು ಮಾಡುವುದು ಕಂಡುಬಂದಲ್ಲಿ, ಸಂಬಂಧಪಟ್ಟ ಇಲಾಖೆಯ ಉನ್ನತಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿಗಳು ಎಚ್ಚರಿಸಿದ್ದಾರೆ.



