ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರ ಲೋಕಾಯುಕ್ತ ಬಂಧನದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಚ್.ಡಿ. ಕುಮಾರಸ್ವಾಮಿ, ಭ್ರಷ್ಟಾಚಾರ ಮುಕ್ತ ಆಡಳಿತದ ಬಗ್ಗೆ ಗಂಭೀರ ಮಾತುಗಳನ್ನಾಡಿದ್ದಾರೆ.
“ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಕಮಿಷನ್ ದಂಧೆ ಇರಲಿಲ್ಲ. ಪ್ರತಿ ತಿಂಗಳ 30ರಂದು ಗುತ್ತಿಗೆದಾರರ ಮನೆ ಬಾಗಿಲಿಗೆ ಹಣದ ಚೆಕ್ ತಲುಪುತ್ತಿತ್ತು. ಅಂತಹ ಶಿಸ್ತು ನನ್ನ ಆಡಳಿತದಲ್ಲಿತ್ತು” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಸತೀಶ್ ಜಾರಕಿಹೋಳಿ ಅವರು ‘ಎಲ್ಲಾ ಕಾಲದಲ್ಲೂ ಕಮಿಷನ್ ನಡೆಯುತ್ತಿತ್ತು’ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಹೆಚ್ಡಿಕೆ, “ನನ್ನ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಯಾರೂ ಹೇಳಿಲ್ಲ” ಎಂದು ಪ್ರತಿಪಾದಿಸಿದರು.
ರಾಜ್ಯದಲ್ಲಿ ಕಮಿಷನ್ ಹಾವಳಿ ತಪ್ಪಬೇಕಾದರೆ ಯಾರ ನಾಯಕತ್ವ ಬೇಕು ಎಂಬುದನ್ನು ಜನರೇ ನಿರ್ಧರಿಸುವ ಕಾಲ ಬಂದಿದೆ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.



