ಹೊಸದಿಗಂತ ಶಿಕಾರಿಪುರ:
ಶಿಕಾರಿಪುರ ತಾಲೂಕಿನ ಯುವಜನತೆ ಮತ್ತು ಪೋಷಕರ ಉದ್ಯೋಗದ ಕನಸನ್ನು ನನಸು ಮಾಡುವಲ್ಲಿ ‘ಶಿಕಾರಿಪುರ ಬೃಹತ್ ಉದ್ಯೋಗ ಮೇಳ’ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿವೇಕ್ ಆಳ್ವ ಹರ್ಷ ವ್ಯಕ್ತಪಡಿಸಿದರು.

ನಗರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ಈ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನದ ಅಂಗವಾಗಿ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮೇಳದ ಪ್ರಮುಖ ಅಂಕಿ-ಅಂಶಗಳು:
ಭಾಗವಹಿಸಿದ ಕಂಪನಿಗಳು: 83ಕ್ಕೂ ಹೆಚ್ಚು ಪ್ರತಿಷ್ಠಿತ ಸಂಸ್ಥೆಗಳು.
ಹಾಜರಾದ ಅಭ್ಯರ್ಥಿಗಳು: 1363 ಉದ್ಯೋಗಾಕಾಂಕ್ಷಿಗಳು.
ಆಯ್ಕೆ ಹಂತ ತಲುಪಿದವರು: 1181 ಅಭ್ಯರ್ಥಿಗಳು.
ಸ್ಥಳದಲ್ಲೇ ನೇಮಕಾತಿ: 351 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ.
“ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು,” ಎಂದು ವಿವೇಕ್ ಆಳ್ವ ಯುವಜನತೆಗೆ ಕರೆ ನೀಡಿದರು. ಕಳೆದ ಎರಡುವರೆ ತಿಂಗಳಿನಿಂದ ಶಿರಾಳಕೊಪ್ಪ ಮತ್ತು ಶಿಕಾರಿಪುರದಲ್ಲಿ ನಡೆಸಿದ ಮಾಹಿತಿ ಶಿಬಿರಗಳು 2000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಿವಕುಮಾರ್ ಜಿ.ಎಸ್. ಮಾತನಾಡಿ, ಆಳ್ವಾಸ್ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಈ ಮೇಳವು ತಾಲೂಕಿನ ಗ್ರಾಮೀಣ ಯುವಕರಿಗೆ ಹೊಸ ದಾರಿಯನ್ನು ತೋರಿಸಿದೆ. ಈ ಯಶಸ್ಸಿಗೆ ಶ್ರಮಿಸಿದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಬಿ. ಶಿವಕುಮಾರ್ ಅವರಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಸಮನ್ವಯಾಧಿಕಾರಿ ಶ್ರೀ ಕುಬೇರಪ್ಪ ಕೆ., ಶ್ರೀ ಶ್ರವಣ್, ಶ್ರೀ ಬಸವರಾಜ ಮಠದ್, ವಿವಿಧ ಕಾಲೇಜುಗಳ ಪ್ರಾಚಾರ್ಯರು, ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



