ಹೊಸದಿಗಂತ ವರದಿ ಬೀದರ್:
ನಗರದ ಪ್ರಮುಖ ರಸ್ತೆಗಳಲ್ಲಿ ತಿಂಗಳುಗಟ್ಟಲೆ ಬಿದ್ದಿದ್ದ ಗುಂಡಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರೂ ಕ್ರಮ ಕೈಗೊಳ್ಳದ ನಗರಸಭೆ ಅಧಿಕಾರಿಗಳು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜುಲೈ 6ರ ಭೇಟಿ ಹಿನ್ನೆಲೆಯಲ್ಲಿ ಇದೀಗ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ.
ನಗರದ ಹಲವು ರಸ್ತೆಗಳಲ್ಲಿ ಗುಂಡಿಗಳಿಂದ ವಾಹನ ಸಂಚಾರ ದುಸ್ತರವಾಗಿದ್ದು, ಮಳೆ ನೀರು ನಿಂತ ಪರಿಣಾಮ ಅಪಘಾತದ ಭೀತಿಯೂ ಹೆಚ್ಚಾಗಿತ್ತು. ಸಮಸ್ಯೆ ಬಗ್ಗೆ ಸಾರ್ವಜನಿಕರು ಹಲವು ಬಾರಿ ಗಮನ ಸೆಳೆದರೂ ನಗರಸಭೆ ಸಮರ್ಪಕ ಕ್ರಮ ಕೈಗೊಂಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:
ಈ ಹಿಂದೆ ಸುಮಾರು ₹24 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಕೆಲವೇ ತಿಂಗಳಲ್ಲಿ ಕಾಮಗಾರಿ ಹಾಳಾಗಿ ರಸ್ತೆಗಳು ಮತ್ತೆ ಗುಂಡಿಗಳಿಂದ ತುಂಬಿದ್ದವು. ಇದರಿಂದ ನಗರಸಭೆಯ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದೀಗ ಮುಖ್ಯಮಂತ್ರಿ ಭೇಟಿ ಸಮೀಪಿಸುತ್ತಿದ್ದಂತೆ ಅಧಿಕಾರಿಗಳು ತಾತ್ಕಾಲಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಆರಂಭಿಸಿದ್ದಾರೆ. “ಸಿಎಂ ಬರುತ್ತಿದ್ದಾರೆ ಎಂಬ ಕಾರಣಕ್ಕಷ್ಟೇ ದುರಸ್ತಿ ನಡೆಯುತ್ತಿದೆ, ಜನರ ಸಮಸ್ಯೆ ಬಗ್ಗೆ ಮೊದಲೇ ಗಮನಹರಿಸಬೇಕಿತ್ತು” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



