ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ, ಕರ್ನಾಟಕದ ರೈತರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ನಂಜನಗೂಡಿನ ಬಾಳೆಹಣ್ಣು, ಮೈಸೂರಿನ ವೀಳ್ಯೆದೆಲೆ ಹಾಗೂ ಇಂಡಿಯಲ್ಲಿ ಬೆಳೆಯುವ ನಿಂಬೆಹಣ್ಣುಗಳನ್ನು ಮಾಲ್ಡೀವ್ಸ್ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಭಾರತದ ಕೃಷಿ ಉತ್ಪನ್ನಗಳು ಸುಲಭವಾಗಿ ವಿಮಾನದಲ್ಲಿ ವಿದೇಶಗಳನ್ನು ತಲುಪುತ್ತಿವೆ. ಕರ್ನಾಟಕದ ನಂಜನಗೂಡಿನ ಬಾಳೆಹಣ್ಣು, ಮೈಸೂರಿನ ವೀಳ್ಯದೆಲೆ ಮತ್ತು ಇಂಡಿ ನಿಂಬೆಹಣ್ಣುಗಳನ್ನು ಮಾಲ್ಡೀವ್ಸ್ಗೆ ರಫ್ತು ಮಾಡಲಾಗುತ್ತಿದೆ. ಈ ಉತ್ಪನ್ನಗಳು ತಮ್ಮ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ ಮತ್ತು ಜಿಐ ಟ್ಯಾಗ್ ಅನ್ನು ಸಹ ಪಡೆದಿವೆ ಎಡನು ತಿಳಿಸಿದರು.
ನಂಜನಗೂಡು ರಸಬಾಳೆಯು ಕರ್ನಾಟಕದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬೆಳೆಯುವ ವಿಶಿಷ್ಟ ರುಚಿ, ಪರಿಮಳ ಹಾಗೂ ದಪ್ಪ ತಿರುಳಿಗೆ ಹೆಸರಾದ ಪ್ರಸಿದ್ಧ ಬಾಳೆಹಣ್ಣು. ಇದು 2005ರಲ್ಲಿ ಭೌಗೋಳಿಕ ಸೂಚಕ (GI) ಟ್ಯಾಗ್ ಪಡೆದಿದೆ.
ಇನ್ನು ಮೈಸೂರು ವೀಳ್ಯದೆಲೆ ತನ್ನ ವಿಶಿಷ್ಟ ಸುವಾಸನೆ, ವಿನ್ಯಾಸ ಮತ್ತು ಖಾರವಾದ ರುಚಿಗೆ ಪ್ರಸಿದ್ಧವಾಗಿದೆ. 2006ರಲ್ಲಿ ಜಿಐ ಟ್ಯಾಗ್ ಪಡೆದ ಈ ಎಲೆ, ಮೈಸೂರು ಭಾಗದ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರಸಿದ್ಧ ಕಾಜಿ ನಿಂಬೆಹಣ್ಣು 2022ರಲ್ಲಿ ಭೌಗೋಳಿಕ ಸೂಚ್ಯಂಕ (GI Tag) ಮಾನ್ಯತೆ ಪಡೆದಿದೆ. ಇದು ವಿಶಿಷ್ಟ ರುಚಿ, ತೆಳುವಾದ ಸಿಪ್ಪೆ ಮತ್ತು ಅತ್ಯಧಿಕ ರಸವತ್ತತೆಗೆ ಹೆಸರುವಾಸಿಯಾಗಿದೆ.



