ಹೊಸದಿಗಂತ ವರದಿ ಕುಮಟಾ :
ರಾಜ್ಯದಲ್ಲಿ ಸದ್ಯ ಕೇಳಿಬರುತ್ತಿರುವ ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳಿಗೆ ಬ್ರೇಕ್ ಹಾಕುವ ಅಗತ್ಯವಿದೆ. ಸಿ.ಎಂ ಬದಲಾವಣೆ ಅಥವಾ ಮುಂದುವರಿಕೆ ಎಂಬುದು ಸಂಪೂರ್ಣವಾಗಿ ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದ್ದು, ಈ ಕುರಿತು ಅನಾವಶ್ಯಕ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಕುಮಟಾದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದಲಿತ ಸಿ.ಎಂ ಬಗ್ಗೆ ಬಹಳ ಆಕಾಂಕ್ಷಿಗಳಿದ್ದಾರೆ. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಈಗ ಮುಖ್ಯಮಂತ್ರಿ ಇದ್ದಾರೆ; ಮುಂದಿನ ನಿರ್ಧಾರ ಹೈಕಮಾಂಡ್ಗೆ ಸೇರಿದ್ದು,” ಎಂದು ಹೇಳಿದರು. ತಮ್ಮ ಹೆಸರು ಸಿ.ಎಂ ರೇಸಿನಲ್ಲಿ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅಂತಹ ಯಾವುದೂ ಇಲ್ಲ, ನಾನು ಈಗ ಆರಾಮವಾಗಿದ್ದೇನೆ,” ಎಂದು ನಗುತ್ತಲೇ ಉತ್ತರಿಸಿದರು.
ಸಿ.ಎಂ ಪಟ್ಟಭದ್ರ ಹಿತಾಸಕ್ತಿಯವರು ‘ನನ್ನ ಸಿ.ಎಂ ಸಹಿಸಲಾರರು’ ಎಂಬ ಟ್ವೀಟ್ ಕುರಿತು ಕೇಳಿದ ಪ್ರಶ್ನೆಗೆ, “ಟ್ವೀಟ್ ಮಾಡಿದ್ದು ಯಾರು ಎಂಬುದೇ ಗೊತ್ತಿಲ್ಲ. ಅದು ಪಕ್ಷದವರಿಗಾ, ವಿರೋಧ ಪಕ್ಷದವರಿಗಾ ತಿಳಿದಿಲ್ಲ,” ಎಂದರು. ಪಕ್ಷ, ಸರ್ಕಾರ ಮತ್ತು ಕಾರ್ಯಕರ್ತರ ಮಟ್ಟದಲ್ಲಿ ಸಿ.ಎಂ ಬದಲಾವಣೆ ಕುರಿತು ಗೊಂದಲ ಇದೆ ಎಂಬ ಪ್ರಶ್ನೆಗೆ, “ಅದಕ್ಕೆ ಬ್ರೇಕ್ ಹಾಕಬೇಕಾಗಿದೆ. ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ,” ಎಂದು ಪುನರುಚ್ಚರಿಸಿದರು.



