ಹೊಸದಿಗಂತ ದಾಂಡೇಲಿ:
ಪ್ರವಾಸಿಗರ ನೆಚ್ಚಿನ ತಾಣವಾದ ದಾಂಡೇಲಿಯ ಅಂಬಿಕಾನಗರ-ಬೊಮ್ಮನಹಳ್ಳಿ ರಸ್ತೆಯಲ್ಲಿ ಬುಧವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಕಾಡಿನಿಂದ ನಾಡಿನ ರಸ್ತೆಗೆ ಬಂದ ಒಂಟಿ ಸಲಗವೊಂದು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ, ನಂತರ ಸವಾರರಿಗೆ ದಾರಿ ಮಾಡಿಕೊಡುವ ಮೂಲಕ ಗಮನ ಸೆಳೆದಿದೆ.
ಬುಧವಾರ ಮಧ್ಯಾಹ್ನ ಅಂಬಿಕಾನಗರದ ರಸ್ತೆಯಲ್ಲಿ ಹಠಾತ್ತನೆ ಒಂಟಿ ಆನೆಯೊಂದು ಪ್ರತ್ಯಕ್ಷವಾಗಿದೆ. ರಸ್ತೆಯ ಮಧ್ಯಭಾಗದಲ್ಲೇ ಗಾಂಭೀರ್ಯದಿಂದ ನಿಂತಿದ್ದ ಗಜರಾಜನನ್ನು ಕಂಡು ವಾಹನ ಸವಾರರು ಕೆಲಕಾಲ ಆತಂಕಕ್ಕೊಳಗಾಗಿ ಸಂಚಾರ ಸ್ಥಗಿತಗೊಳಿಸಿದ್ದರು. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಕೆಲ ಹೊತ್ತು ರಸ್ತೆಯಲ್ಲೇ ಬೀಡುಬಿಟ್ಟಿದ್ದ ಆನೆ, ನಂತರ ಯಾರಿಗೂ ತೊಂದರೆ ನೀಡದೆ ತಾನಾಗಿಯೇ ಪಕ್ಕಕ್ಕೆ ಸರಿದು ವಾಹನಗಳು ಮುಂದೆ ಹೋಗಲು ಅನುವು ಮಾಡಿಕೊಟ್ಟಿದೆ. ಈ ಅಪರೂಪದ ದೃಶ್ಯವನ್ನು ಕಾರಿನಲ್ಲಿದ್ದ ಚಾಲಕರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಆನೆ ದಾರಿ ಬಿಟ್ಟುಕೊಡುತ್ತಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.



