ಹೊಸದಿಗಂತ ಚಿತ್ರದುರ್ಗ:
ಮಧ್ಯ ಕರ್ನಾಟಕದ ಜನರ ದಶಕಗಳ ಕನಸಾದ ದಾವಣಗೆರೆ-ಚಿತ್ರದುರ್ಗ ನೇರ ರೈಲ್ವೆ ಮಾರ್ಗವು 2027ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಘೋಷಿಸಿದ್ದಾರೆ. ಹಂಪನೂರು ಗ್ರಾಮದ ಬಳಿ ಕಾಮಗಾರಿ ಪರಿಶೀಲಿಸಿದ ಅವರು, ಈ ಯೋಜನೆಯಿಂದ ಬೆಂಗಳೂರು ಮತ್ತು ದಾವಣಗೆರೆ ನಡುವಿನ ಅಂತರ ಸುಮಾರು 80 ಕಿಲೋಮೀಟರ್ಗಳಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದರು.
ಭರಮಸಾಗರದವರೆಗಿನ ಕಾಮಗಾರಿ 2027ರ ಜನವರಿ ಹಾಗೂ ಚಿತ್ರದುರ್ಗದವರೆಗಿನ ಕಾಮಗಾರಿ ಜೂನ್ ವೇಳೆಗೆ ಮುಕ್ತಾಯ. 2027ರ ಡಿಸೆಂಬರ್ ವೇಳೆಗೆ ಗದಗ-ವಾಡಿ ಮತ್ತು ರಾಯದುರ್ಗ-ತುಮಕೂರು ಮಾರ್ಗಗಳೂ ಲೋಕಾರ್ಪಣೆ.
ಜಿಲ್ಲೆಯಲ್ಲಿ ಪ್ರಸ್ತುತ ಕಾಮಗಾರಿ ಕೇವಲ 8-9% ರಷ್ಟಿದ್ದು, ಕೆಲಸದ ವೇಗ ಹೆಚ್ಚಿಸಲು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
“ಈ ಮಾರ್ಗವು ಕಾರ್ಯಾರಂಭ ಮಾಡಿದರೆ ಮಧ್ಯ ಕರ್ನಾಟಕದ ಆರ್ಥಿಕ ಮತ್ತು ಕೈಗಾರಿಕಾ ಚಿತ್ರಣವೇ ಬದಲಾಗಲಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬೇಕು.” ಎಂದು ವಿ. ಸೋಮಣ್ಣ ಹೇಳಿದ್ದಾರೆ.
ಜಿಲ್ಲೆಯಲ್ಲಿ ಕಾಮಗಾರಿ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಇನ್ನು ಮುಂದೆ ಪ್ರತಿ ತಿಂಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರ ನೀಡುತ್ತಿದ್ದು, ಗುತ್ತಿಗೆದಾರರು ಮತ್ತು ಇಂಜಿನಿಯರ್ಗಳು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಅವರು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರಪ್ಪ, ರೈಲ್ವೆ ಇಲಾಖೆಯ ಮುಖ್ಯ ಇಂಜಿನಿಯರ್ ಪ್ರದೀಪ್ ಪುರಿ ಹಾಗೂ ಜಿಲ್ಲಾಧಿಕಾರಿ ಗಂಗಾಧರ್ ಸ್ವಾಮಿ ಉಪಸ್ಥಿತರಿದ್ದರು.



