ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದ್ದು, ಅಜಿತ್ ಪವಾರ್ ಅವರ ಪುತ್ರ ಪಾರ್ಥ್ ಪವಾರ್ ಅವರಿಗೆ ಎನ್ಸಿಪಿ ಪಕ್ಷ ರಾಜ್ಯಸಭೆ ಅಭ್ಯರ್ಥಿತ್ವ ನೀಡಲಾಗಿದೆ. ಪಕ್ಷದ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಈ ಘೋಷಣೆ ಮಾಡಿದ್ದಾರೆ.
ರಾಜ್ಯಸಭೆ ಚುನಾವಣೆಯು ಮಾರ್ಚ್ 16ರಂದು ನಡೆಯಲಿದ್ದು, ಗೆಲುವಿಗೆ 37 ಶಾಸಕರ ಬೆಂಬಲ ಅಗತ್ಯವಿದೆ. ಎನ್ಸಿಪಿ ಬಳಿ ಪ್ರಸ್ತುತ 40ಕ್ಕೂ ಹೆಚ್ಚು ಶಾಸಕರ ಬೆಂಬಲವಿರುವ ಹಿನ್ನೆಲೆಯಲ್ಲಿ ಪಾರ್ಥ್ ಪವಾರ್ ಗೆಲುವು ಬಹುತೇಕ ಖಚಿತವಾಗಿದೆ ಎಂದು ಪಕ್ಷದ ವಲಯಗಳು ಹೇಳಿವೆ. ಆಯ್ಕೆಯಾದಲ್ಲಿ ಅವರು ಆರು ವರ್ಷಗಳ ಕಾಲ ರಾಜ್ಯಸಭೆ ಸದಸ್ಯರಾಗಲಿದ್ದಾರೆ.
ಇದನ್ನೂ ಓದಿ:
ಪಾರ್ಥ್ ಪವಾರ್ ಈಗಾಗಲೇ 2019ರ ಲೋಕಸಭೆ ಚುನಾವಣೆಯಲ್ಲಿ ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅವಿಭಜಿತ ಶಿವಸೇನೆಯ ಅಭ್ಯರ್ಥಿ ವಿರುದ್ಧ ಸೋಲು ಅನುಭವಿಸಿದ್ದರು. ಆದರೂ ಪಕ್ಷದ ಒಳವಲಯದಲ್ಲಿ ಸಕ್ರಿಯವಾಗಿದ್ದ ಅವರಿಗೆ ಇದೀಗ ಮೇಲ್ಸಭೆಗೆ ಅವಕಾಶ ಕಲ್ಪಿಸಲಾಗಿದೆ.
ಈ ನಿರ್ಧಾರವನ್ನು ಪಕ್ಷದ ಹಿರಿಯ ನಾಯಕರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ಪ್ರಫುಲ್ ಪಟೇಲ್ ತಿಳಿಸಿದ್ದಾರೆ. ರಾಜ್ಯ ರಾಜಕೀಯದಲ್ಲಿ ಈ ಘೋಷಣೆ ಹೊಸ ಚರ್ಚೆಗೆ ಕಾರಣವಾಗಿದೆ.



