ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಹಾಗೂ ತಮಿಳಗ ವೆಟ್ರಿ ಕಳಗಂ ನಾಯಕ ವಿಜಯ್ ಅವರ ಪತ್ನಿ ಸಂಗೀತಾ ಸಲ್ಲಿಸಿರುವ ವಿಚ್ಛೇದನ ಅರ್ಜಿ ಕುರಿತು ಕೇಳಿದ ಪ್ರಶ್ನೆಗೆ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ. ಪತಿ–ಪತ್ನಿಯ ವೈಯಕ್ತಿಕ ವಿಷಯವನ್ನು ರಾಜಕೀಯಗೊಳಿಸಲು ತಾನು ಸಿದ್ಧನಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ವಿಜಯ್ ಅವರ ರಾಜಕೀಯ ನಿಲುವುಗಳ ಬಗ್ಗೆ ಪ್ರತಿಕ್ರಿಯಿಸಲು ನಾನು ಸಿದ್ಧನಿದ್ದೇನೆ. ಆದರೆ ಅವರ ವೈಯಕ್ತಿಕ ಜೀವನದ ವಿಚಾರದಲ್ಲಿ ಅಭಿಪ್ರಾಯ ಹೇಳುವುದಿಲ್ಲ. ಅದು ಅವರಿಬ್ಬರ ಹಾಗೂ ನ್ಯಾಯಾಲಯದ ಮಧ್ಯದ ವಿಷಯ,” ಎಂದು ಅಣ್ಣಾಮಲೈ ಹೇಳಿದರು.
ಇದನ್ನೂ ಓದಿ:
ರಾಜಕೀಯಕ್ಕೆ ಪ್ರವೇಶಿಸಿದಾಗ ವೈಯಕ್ತಿಕ ವಿಷಯಗಳು ಬಹಿರಂಗವಾಗುವ ಸಾಧ್ಯತೆ ಹೆಚ್ಚುತ್ತದೆ. ಇದನ್ನು ಎದುರಿಸುವ ಧೈರ್ಯ ರಾಜಕೀಯ ನಾಯಕರು ಹೊಂದಿರಬೇಕು ಎಂದು ಅವರು ಅಭಿಪ್ರಾಯಪಟ್ಟರು. ಒತ್ತಡಗಳು ಅನಿವಾರ್ಯವಾಗಿದ್ದು, ಅದನ್ನು ಮೀರಿ ಸಾಗಬೇಕು ಎಂದರು.
ಇದಲ್ಲದೆ, ವಿಜಯ್ ರಾಜಕೀಯಕ್ಕೆ ಬರದೇ ಸಿನೆಮಾ ಕ್ಷೇತ್ರದಲ್ಲೇ ಮುಂದುವರಿದಿದ್ದರೆ ಶಾಂತ ಜೀವನ ನಡೆಸಬಹುದಾಗಿತ್ತು ಎಂಬುದಾಗಿ ಹೇಳಿದರು. ಆದರೆ ರಾಜಕೀಯವನ್ನು ಆರಿಸಿಕೊಂಡಿರುವ ಹಿನ್ನೆಲೆಯಲ್ಲಿ ಎದುರಾಗುವ ಸವಾಲುಗಳನ್ನು ಅವರು ಸಮರ್ಥವಾಗಿ ಎದುರಿಸಬೇಕಿದೆ ಎಂದು ಸೂಚಿಸಿದರು.



