ಹೊಸದಿಗಂತ ಡಿಜಿಟಲ್ ಡೆಸ್ಕ್
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಸದೃಶ ಸನ್ನಿವೇಶದಿಂದಾಗಿ ದುಬೈ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯರು, ಅದರಲ್ಲೂ ವಿಶೇಷವಾಗಿ ಕನ್ನಡಿಗರ ಸುರಕ್ಷತೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲಿರುವ ಶಾಸಕರಾದ ಭೋಜೇಗೌಡ ಮತ್ತು ಎ.ಸಿ. ಶ್ರೀನಿವಾಸ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಡಿಸಿಎಂ ತಿಳಿಸಿದ್ದಾರೆ.
ವಿದೇಶದಲ್ಲಿರುವ ಭಾರತೀಯರ ರಕ್ಷಣೆ ಕೇಂದ್ರ ಸರ್ಕಾರದ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ದೆಹಲಿಯ ರೆಸಿಡೆಂಟ್ ಕಮಿಷನರ್ ಮೂಲಕ ನಿರಂತರ ಸಂಪರ್ಕ ಸಾಧಿಸಲು ಸೂಚಿಸಲಾಗಿದೆ.
ಮಕ್ಕಳ ಶಾಲೆಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ ಅವರು, ಭಾರತವು ಶಾಂತಿಯನ್ನು ಪ್ರತಿಪಾದಿಸುವ ದೇಶವಾಗಿದ್ದು, ಇಂತಹ ಅಮಾನವೀಯ ಕೃತ್ಯಗಳು ನಿಲ್ಲಬೇಕು ಎಂದಿದ್ದಾರೆ.
ರಾಜ್ಯದಿಂದ ಪ್ರತ್ಯೇಕ ಹೆಲ್ಪ್ಲೈನ್ ತೆರೆಯುವ ಬದಲಿಗೆ ವಿದೇಶಾಂಗ ಇಲಾಖೆಯೊಂದಿಗೆ ಸಮನ್ವಯ ಸಾಧಿಸಲಾಗುವುದು. ಅಲ್ಲಿರುವ ಕನ್ನಡ ಸಂಘಟನೆಗಳು ಸಂಕಷ್ಟದಲ್ಲಿರುವವರಿಗೆ ಧೈರ್ಯ ತುಂಬಬೇಕು ಎಂದು ಅವರು ಕೋರಿದ್ದಾರೆ.



