ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಸುಮಾರು 2,700 ಕೋಟಿ ರೂ. ಮೌಲ್ಯದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಅವರು, ಸಾರ್ವಜನಿಕ ಸಭೆಯಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹಿಂದಿನ ಆಡಳಿತ ಅವಧಿಯಲ್ಲಿ ಪುದುಚೇರಿ ಭ್ರಷ್ಟಾಚಾರ ಮತ್ತು ಅಪರಾಧಗಳಿಂದ ಬಳಲಿತು ಎಂದು ಆರೋಪಿಸಿದ ಮೋದಿ, ಆ ವರ್ಷಗಳನ್ನು ಜನರು ಮರೆಯಬಾರದು ಎಂದರು. ಕೆಲ ರಾಜಕೀಯ ಶಕ್ತಿಗಳು ಪ್ರದೇಶದ ಅಭಿವೃದ್ಧಿಗೆ ಅಡ್ಡಿಯಾಗಿವೆ. ಕಾಂಗ್ರೆಸ್ ಪುದುಚೇರಿಯನ್ನು ದೆಹಲಿಯಲ್ಲಿ ಒಂದು ಕುಟುಂಬಕ್ಕೆ ಎಟಿಎಂ ಆಗಿ ಪರಿವರ್ತಿಸಿದೆ. ನಾವು ಡಿಎಂಕೆ ಬಗ್ಗೆ ಮಾತನಾಡಿದರೆ, ಹಗರಣಗಳ ಸುದೀರ್ಘ ಪಟ್ಟಿಯನ್ನೇ ಮಾಡಬಹುದು. ಎಂದು ಟೀಕಿಸಿದರು. ಪುನಃ ಅದೇ ಶಕ್ತಿಗಳು ಅಧಿಕಾರದತ್ತ ನೋಡುತ್ತಿವೆ ಎಂದು ಹೇಳಿದರು.
ಇದನ್ನೂ ಓದಿ:
2047ರೊಳಗೆ ಅಭಿವೃದ್ಧಿ ಭಾರತ ಗುರಿ ಸಾಧಿಸಲು ಪುದುಚೇರಿಯೂ ಸಮಗ್ರವಾಗಿ ಮುನ್ನಡೆಯಬೇಕು ಎಂದು ಪ್ರಧಾನಿ ಒತ್ತಿಹೇಳಿದರು. ನಗರ ಹಾಗೂ ಗ್ರಾಮೀಣ ಮೂಲಸೌಕರ್ಯಕ್ಕೆ ಕೇಂದ್ರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ಪ್ರವಾಸೋದ್ಯಮವನ್ನು ಪುದುಚೇರಿಯ ಪ್ರಮುಖ ಶಕ್ತಿಯೆಂದು ಬಣ್ಣಿಸಿದ ಅವರು, ಆಧ್ಯಾತ್ಮಿಕ, ಪರಿಸರ ಮತ್ತು ಆರೋಗ್ಯ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೂಡಿಕೆ ಹೆಚ್ಚಿಸಲಾಗುತ್ತಿದೆ ಎಂದರು. ವಾರಾಂತ್ಯ ತಾಣವಾಗಿ ಈಗಾಗಲೇ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪುದುಚೇರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



