ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯ ದೇಶಗಳಲ್ಲಿ ಕಾಣಿಸಿಕೊಂಡಿರುವ ಸಂಘರ್ಷ ಕೇರಳಕ್ಕೆ ನಿಧಾನವಾಗಿ ಬಲವಾದ ಪೆಟ್ಟು ನೀಡಲು ಆರಂಭಿಸಿದೆ.
ಗಲ್ಫ್ ರಾಷ್ಟ್ರಗಳೊಂದಿಗೆ ನಿಕಟ ವ್ಯವಹಾರ ಹೊಂದಿರುವ ಇಲ್ಲಿನ ವ್ಯಾಪಾರಿಗಳು, ಪ್ರಯಾಣಿಕರನ್ನೇ ಅವಲಂಬಿಸಿ ಜೀವನ ನಡೆಸುವ ವಾಹನ ಚಾಲಕರು, ರಫ್ತು ಕಾಯಕದಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು ಈಗ ನಿಧಾನವಾಗಿ ಉದ್ಯೋಗವಿಲ್ಲದೆ ಸಂಕಷ್ಟದ ಸ್ಥಿತಿ ಅನುಭವಿಸುತ್ತಿದ್ದಾರೆ.
ಕೇರಳದ ಕರಿಪ್ಪೂರ್ನಿಂದ ಗಲ್ಫ್ ರಾಷ್ಟ್ರಗಳಿಗೆ ಹಣ್ಣು, ತರಕಾರಿ ವಿಮಾನ ಮೂಲಕ ರಫ್ತು ಮಾಡಲಾಗುತ್ತಿದೆ. ಇದೀಗ ವಿಮಾನ ಹಾರಾಟ ಹಠಾತ್ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ವ್ಯಾಪಾರಿಗಳು ರಫ್ತು ಮಾಡಲು ಸಜ್ಜುಗೊಳಿಸಿದ್ದ ಹಣ್ಣು ತರಕಾರಿಗಳನ್ನು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ. ಇದರೊಂದಿಗೆ ಈ ಕೃಷಿ ಉತ್ಪನ್ನ ಬೆಳೆಯುವ ಕೃಷಿಕನಿಗೂ ಸಂಕಷ್ಟ ಬಂದೊದಗಿದೆ. ತರಕಾರಿ, ಹಣ್ಣುಗಳಿಗೆ ಬೇಡಿಕೆ ಕುಸಿಯುತ್ತಿದೆ. ಜೊತೆಗೆ ಮಧ್ಯವರ್ತಿಗಳು, ಕಾರ್ಮಿಕರು ಕೂಡಾ ಸಂಕಷ್ಟಕ್ಕೊಳಗಾಗಿದ್ದಾರೆ.
ಇನ್ನೊಂದೆಡೆ ಕರಿಪ್ಪೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲಿಯೇ ಸುಮಾರು ೨೩೦ ಅಧಿಕೃತ ಟ್ಯಾಕ್ಸಿಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಗಲ್ಪ್ ರಾಷ್ಟ್ರಗಳ ವಿಮಾನ ಸ್ಥಗಿತವಾದ ಕಾರಣ ಇದೀಗ ಇವರಿಗೂ ಆರ್ಥಿಕ ಹೊಡೆತ ನೀಡಿದೆ. ಇನ್ನು ಇಲ್ಲಿನ ಹೊಟೇಲ್, ಉದ್ಯಮಗಳ ಮೇಲೂ ಜಾಗತಿಕ ಸಂಘರ್ಷ ಬಲವಾಗಿಯೇ ಏಟು ನೀಡುತ್ತಿದೆ.



