ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭಾ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಅವಧಿಯನ್ನು ರಾಜ್ಯದ ಇತಿಹಾಸದಲ್ಲಿ “ಸುವರ್ಣ ಅಧ್ಯಾಯ” ಎಂದು ಬಣ್ಣಿಸಿದ್ದಾರೆ.
ನಿತೀಶ್ ಕುಮಾರ್ ಅವರ ಅವಧಿ “ಅದ್ಭುತ”. ಈ ಅವಧಿಯಲ್ಲಿ ಅವರು ಬಿಹಾರದ ಪ್ರಗತಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಇದೀಗ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಅವರು ರಾಷ್ಟ್ರೀಯ ರಾಜಕೀಯಕ್ಕೆ ಮರಳುತ್ತಿರುವುದನ್ನು ಸ್ವಾಗತಿಸುತ್ತೇನೆ ಎಂದು ಹೇಳಿದರು.
ನಿತೀಶ್ ಕುಮಾರ್ 2005 ರಿಂದ ಇಲ್ಲಿಯವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಧಿಕಾರಾವಧಿ ನಿಜವಾಗಿಯೂ ಅದ್ಭುತವಾಗಿತ್ತು. ಈ ಅವಧಿಯು ಬಿಹಾರದ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ಬರೆಯಲ್ಪಡುತ್ತದೆ. ಶಾಸಕ, ಸಂಸದ, ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿ ಅವರ ಸುದೀರ್ಘ ವೃತ್ತಿಜೀವನದುದ್ದಕ್ಕೂ ಅವರ ಕುರ್ತಾ ಎಂದಿಗೂ ಕಳಂಕಿತವಾಗಿಲ್ಲ. ಅವರ ಇಡೀ ಜೀವನ ಭ್ರಷ್ಟಾಚಾರ ಆರೋಪಗಳಿಂದ ಮುಕ್ತವಾಗಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ.
11 ವರ್ಷಗಳ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕಾಲದಲ್ಲಿ ನಿತೀಶ್ ಬಿಹಾರದ ಪ್ರಗತಿಗೆ ಎಲ್ಲ ರೀತಿಯಲ್ಲೂ ಮಹತ್ವದ ಕೊಡುಗೆ ನೀಡಿದ್ದಾರೆ . ಅವರು ಮತ್ತೊಮ್ಮೆ ರಾಜ್ಯಸಭಾ ಸಂಸದರಾಗಿ ದೆಹಲಿಗೆ ಮರಳುತ್ತಿದ್ದಾರೆ. ನಾನು ಮತ್ತು ನಮ್ಮ ಎಲ್ಲಾ ಎನ್ಡಿಎ ಸಹೋದ್ಯೋಗಿಗಳು ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಅವರ ಮುಖ್ಯಮಂತ್ರಿ ಅವಧಿಯನ್ನು ಬಿಹಾರದ ಜನರು ಯಾವಾಗಲೂ ಸ್ಮರಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಶಾ ತಿಳಿಸಿದ್ದಾರೆ.



