ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಕರ್ಬಿ ಆಂಗ್ಲಾಂಗ್ನಲ್ಲಿ ಸುಖೋಯ್ ಸು-30 ಎಂಕೆಐ ಯುದ್ಧ ವಿಮಾನ ಪತನದಲ್ಲಿ ಇಬ್ಬರು ಪೈಲಟ್ಗಳಾದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ದುರಂತ ಅಂತ್ಯ ಕಂಡಿದ್ದಾರೆ.
ಈ ಪೈಕಿ ಮಹಾರಾಷ್ಟ್ರದ ನಾಗ್ಪುರ ಮೂಲದ 28 ವರ್ಷದ ಪೂರ್ವೇಶ್ ದುರಾಗ್ಕರ್ ಕಳೆದ ವರ್ಷ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ಭಾಗವಾಗಿದ್ದರು.
ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22 ರಂದು ನಡೆದ ಭೀಕರ ಉಗ್ರ ದಾಳಿಗೆ ಪ್ರತಿ ಉತ್ತರವಾಗಿ ಭಾರತ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯನ್ನು ಆರಂಭಿಸಿತ್ತು.
ಆದರೆ ಅವರು ಆಪರೇಷನ್ ಸಿಂದೂರ್ ಭಾಗವಾಗಿರುವ ವಿಚಾರ ಕಾರ್ಯಾಚರಣೆ ನಡೆದು 15 ದಿನಗಳವರೆಗೆ ಮನೆಯವರಿಗೆ ಗೊತ್ತೇ ಇರಲಿಲ್ಲ.
ಈ ಬಗ್ಗೆ ಪುರವೇಶ್ ದುರಾಗ್ಕರ್ ಅವರ ತಂದೆ ರವೀಂದ್ರ ದುರಾಗ್ಕರ್ ಮಾತನಾಡುತ್ತಾ, ಆಪರೇಷನ್ ಸಿಂಧೂರ್ನಲ್ಲಿ ಮಗ ಭಾಗಿಯಾಗಿದ್ದಾನೆ ಎಂಬುದು ನಮಗೆ ಆರಂಭದಲ್ಲಿ ಗೊತ್ತಿರಲಿಲ್ಲ. ಕಾರ್ಯಾಚರಣೆ ನಿಲ್ಲಿಸಿದ ಸುಮಾರು 15 ದಿನಗಳ ಬಳಿಕವಷ್ಟೇ ನಮಗೆ ಗೊತ್ತಾಗಿದ್ದು. ಆ ಸಮಯದಲ್ಲಿ ಅವನ ಬಳಿ ಮೊಬೈಲ್ ಫೋನ್ ಇರಲಿಲ್ಲ, ಆದ್ದರಿಂದ ನಾವು ಸಂಪರ್ಕದಲ್ಲಿರಲಿಲ್ಲ ಎಂದು ವಿವರಿಸಿದ್ದಾರೆ.
ನನ್ನ ಮಗ ಯುದ್ಧವಿಮಾನ ತರಬೇತಿಯನ್ನು ಅಪಾರ ಹೆಮ್ಮೆಯಿಂದ ನೋಡುತ್ತಿದ್ದ. ದೇಶ ಸೇವೆಗೆ ತನ್ನ ಜೀವನವನ್ನೇ ಅರ್ಪಿಸಿದ್ದಾನೆ. ಅವನಿಂದ ಎಲ್ಲರೂ ಪ್ರೇರಣೆ ಪಡೆಯಬೇಕು ಎಂದು ಹೇಳುತ್ತಾ ಭಾವುಕರಾಗಿದ್ದಾರೆ.
ಪುರವೇಶ್ ದುರಾಗ್ಕರ್ ಮೂಲತಃ ಮಹಾರಾಷ್ಟ್ರದ ನಾಗ್ಪುರ ಮೂಲದವರು. ಕೇವಲ ನಾಲ್ಕು ವರ್ಷಗಳ ಹಿಂದೆಯಷ್ಟೇ ಭಾರತೀಯ ವಾಯುಸೇನೆಗೆ ಪುರವೇಶ್ ದುರಾಗ್ಕರ್ ಸೇರ್ಪಡೆಗೊಂಡಿದ್ದರು.



