ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ನಾಗರಭಾವಿಯಲ್ಲಿ ಬೆಳಗಿನ ಜಾವ ಒಬ್ಬರೇ ವಾಕಿಂಗ್ ಹೋಗಿದ್ದ ಮಹಿಳೆ 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ.
ಪೊಲೀಸರು ಹಾಗೂ ತುರ್ತು ಸೇವೆಗಳ ನೆರವಿನಿಂದ ಮಹಿಳೆಯನ್ನು ರಕ್ಷಿಸಲಾಗಿದೆ, ಇದು 56 ವರ್ಷದ ಪರಿಮಳಾಗೆ ಮರುಜನ್ಮ ಎನ್ನಬಹುದಾಗಿದೆ.
ಆಗಿದ್ದೇನು?
ಬೆಳಗಿನ ಜಾವ 25 ಅಡಿ ಆಳದ ಬೃಹತ್ ಗುಂಡಿಗೆ ಪರಿಮಳಾ ಬಿದ್ದಿದ್ದಾರೆ. ಅಷ್ಟು ಆಳವಿರುವ ಕಾರಣ ಅದರಿಂದ ಹೊರಬರಲು ಸಾಧ್ಯವಾಗಿಲ್ಲ. ಅಲ್ಲದೇ ಬೆಳಗಿಮ ಜಾವವಾದ ಕಾರಣ ಸಹಾಯಕ್ಕೆ ಕೂಗಲು ಜನರೂ ಇರಲಿಲ್ಲ. ನನ್ನ ಜೀವನ ಇಲ್ಲಿಗೇ ಮುಗಿಯಿತು ಎನ್ನುವ ಆಘಾತದಿಂದ ಪರಿಮಳಾ ಅಸ್ವಸ್ಥರಾಗಿದ್ದಾರೆ.
ಎಷ್ಟು ಹೊತ್ತಾದರೂ ಅಮ್ಮ ಮನೆಗೆ ಬಂದಿಲ್ಲ ಎಂದು ಗಾಬರಿಯಾದ ಮಗ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಚಂದ್ರ ಲೇಔಟ್ ಪೊಲೀಸರು, ಹೊಯ್ಸಳ ಸಿಬ್ಬಂದಿ ಮಹಿಳೆಯ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಮಹಿಳೆಯ ಫೋನ್ ಸಿಗ್ನಲ್ ನಾಗರಭಾವಿ ಪಾರ್ಕ್ ಬಳಿ ತೋರಿಸಿದೆ. ತಕ್ಷಣವೇ ಪೊಲೀಸರು ಆ ಜಾಗಕ್ಕೆ ಬಂದು ಹುಡುಕಾಡಿದ್ದಾರೆ.
ಈ ವೇಳೆ ಗುಂಡಿಯಲ್ಲಿ ಬಗ್ಗಿ ನೋಡಿದಾಗ ಮಹಿಳೆ ಅಸ್ವಸ್ಥರಾಗಿರುವುದು ಕಾಣಿಸಿದೆ. ಸ್ಥಳೀಯರ ಸಹಾಯದಿಂದ ಸಾಹಸ ಮಾಡಿ ಗುಂಡಿಯಿಂದ ಸುಧಾ ಅವರನ್ನು ಮೇಲೆ ಎತ್ತಲಾಗಿದೆ. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸರಿಯಾದ ಸಮಯಕ್ಕೆ ಫೋನ್ ಮಾಡಿದ್ದ ಮಗನಿಂದ ಜೀವ ಉಳಿಸಿದೆ. ಅಂತೆಯೇ ಪೊಲೀಸರ ಕಾರ್ಯಕ್ಷಮತೆ ಹಾಗೂ ಸಾರ್ವಜನಿಕರ ಸಹಾಯ ಮನೋಭಾವದಿಂದ ಜೀವ ಉಳಿದಿದೆ.



