ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕಾಗುತ್ತಿದ್ದರೂ, ಬೆಂಗಳೂರು ಜಲಮಂಡಳಿ (BWSSB) ನಗರದಾದ್ಯಂತ ಕುಡಿಯುವ ನೀರಿನ ಸಂರಕ್ಷಣೆಗಾಗಿ ಅತ್ಯಂತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಜಾರಿಗೆ ತರುತ್ತಿದ್ದ ನೀರಿನ ಉಳಿತಾಯ ಕ್ರಮಗಳನ್ನು, ಈ ಬಾರಿ ಮಳೆಗಾಲದಲ್ಲೇ ಕಡ್ಡಾಯವಾಗಿ ಜಾರಿಗೊಳಿಸಿ ಜಲಮಂಡಳಿ ಆದೇಶಿಸಿದೆ.
ಕಾವೇರಿ ನೀರು ಅಥವಾ ಶುದ್ಧೀಕರಿಸಿದ ಕುಡಿಯುವ ನೀರಿನಿಂದ ಕಾರು, ಬೈಕ್ ಸೇರಿದಂತೆ ಯಾವುದೇ ವಾಹನಗಳನ್ನು ತೊಳೆಯುವಂತಿಲ್ಲ. ಮನೆ ಮತ್ತು ವಾಣಿಜ್ಯ ಸಂಕೀರ್ಣಗಳ ಕೈದೋಟ ಅಥವಾ ಗಿಡಗಳಿಗೆ ಕುಡಿಯುವ ನೀರನ್ನು ಹರಿಸುವುದನ್ನು ನಿಷೇಧಿಸಲಾಗಿದೆ. ಅಂಗಡಿ ಮುಂಗಟ್ಟುಗಳ ಮುಂದೆ ರಸ್ತೆ ತೊಳೆಯಲು ಅಥವಾ ಧೂಳು ನಿಯಂತ್ರಣಕ್ಕೆ ಕುಡಿಯುವ ನೀರು ಬಳಸುವಂತಿಲ್ಲ.ಯಾವುದೇ ರೀತಿಯ ಕಟ್ಟಡ ಕಾಮಗಾರಿಗಳಿಗೆ ಹಾಗೂ ಸಿನಿಮಾ ಮಂದಿರ, ಮಾಲ್ಗಳಲ್ಲಿ ಸ್ವಚ್ಛತೆಗೆ ಕಾವೇರಿ ನೀರನ್ನು ಬಳಸಬಾರದು ಎಂದು ಎಚ್ಚರಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಭಾರಿ ದಂಡ!
ಜಲಮಂಡಳಿಯ ಆದೇಶವನ್ನು ಉಲ್ಲಂಘಿಸಿ ಕುಡಿಯುವ ನೀರನ್ನು ಪೋಲು ಮಾಡುವುದು ಕಂಡುಬಂದಲ್ಲಿ ಭಾರಿ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ ಉಲ್ಲಂಘನೆಗೆ 5,000 ದಂಡ ವಿಧಿಸಲಾಗುವುದು. ಮತ್ತೆ ಮರುಕಳಿಸಿದರೆ ಪ್ರತಿದಿನ ಹೆಚ್ಚುವರಿಯಾಗಿ ₹500 ದಂಡದ ಜೊತೆಗೆ ನೀರಿನ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:
BWSSB ಈ ಕ್ರಮ ಕೈಗೊಂಡಿದ್ದೇಕೆ?
ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದರೂ, ಭವಿಷ್ಯದಲ್ಲಿ ಎದುರಾಗಬಹುದಾದ ನೀರಿನ ಅಭಾವವನ್ನು ತಡೆಯಲು ಮತ್ತು ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಲು ಜಲಮಂಡಳಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಸಾರ್ವಜನಿಕರು ಕುಡಿಯುವ ನೀರಿನ ಬದಲು ಸಂಸ್ಕರಿಸಿದ ನೀರನ್ನು ಇತರೆ ಉದ್ದೇಶಗಳಿಗೆ ಬಳಸುವಂತೆ ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷರು ಮನವಿ ಮಾಡಿದ್ದಾರೆ.



