ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ ಆವರಣದಲ್ಲಿ ಇಂದು ವಿರೋಧ ಪಕ್ಷದ ಸಂಸದರು ನಡೆಸಿದ ಪ್ರತಿಭಟನೆಯನ್ನು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರು ಟೀಕಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೇಶದ ಹಿತಾಸಕ್ತಿ ಮತ್ತು ಚರ್ಚೆಯ ಮೇಲೆ ಆಸಕ್ತಿಯೇ ಇಲ್ಲ. ಅವ್ಯವಸ್ಥೆ ಸೃಷ್ಟಿಸುವುದಷ್ಟೇ ಅದರ ಏಕೈಕ ಗುರಿಯಾಗಿದೆ ಎಂದು ಟೀಕಿಸಿದರು.
ಸಂಸತ್ ಆವರಣದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷವು ಯಾವುದೇ ವಿಷಯವಿರಲಿ ಅದರ ಬಗ್ಗೆ ಚರ್ಚೆ ನಡೆಸುವ ಬದಲು ಅವ್ಯವಸ್ಥೆ ಸೃಷ್ಟಿಸುವುದನ್ನೇ ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ಸದನಗಳಲ್ಲಿ ಕಾಂಗ್ರೆಸ್ ಸಾಂವಿಧಾನಿಕ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ. ಕುಟುಂಬ ಮೊದಲು ಎಂಬ ನಿಯಮ ಅನುಸರಿಸುತ್ತಿರುವಂತೆ ಕಾಣುತ್ತಿದೆ. ಆ ಪಕ್ಷದಲ್ಲಿ ಎಲ್ಲದೂ ಒಂದು ಕುಟುಂಬವನ್ನು ಸಂತುಷ್ಟಪಡಿಸಲು ಮತ್ತು ಅವರ ರಾಜಕುಮಾರ ರಾಹುಲ್ ಗಾಂಧಿಯನ್ನು ಉತ್ತೇಜಿಸುವ ಸಲುವಾಗಿಯೇ ನಡೆಯುತ್ತದೆ ಎಂದು ದೂರಿದರು.
ರಾಜ್ಯಸಭೆಯಲ್ಲಿ ಇಂದು ವಿದೇಶಾಂಗ ಸಚಿವರು ಪಶ್ಚಿಮ ಏಷ್ಯಾದಲ್ಲಿನ ಪರಿಸ್ಥಿತಿ ಬಗ್ಗೆ ಸದನಕ್ಕೆ ವಿವರಿಸಲು ಮುಂದಾದರೆ ವಿರೋಧ ಪಕ್ಷಕ್ಕೆ ಅದನ್ನು ಕೇಳುವ ವ್ಯವಧಾನವೇ ಇಲ್ಲದಂತೆ ವರ್ತಿಸಿತು ಎಂದು ಜೋಶಿ ಆರೋಪಿಸಿದರು.



