ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕವಾಗಿ ಯುದ್ಧದ ವಾತಾವರಣ ಮತ್ತು ಪೂರೈಕೆ ಸರಪಳಿಯಲ್ಲಿ ಏರುಪೇರಾಗುವ ಭೀತಿಯ ನಡುವೆಯೂ, ಭಾರತದಲ್ಲಿ ಇಂಧನ ಲಭ್ಯತೆಯ ಕುರಿತು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ದೊಡ್ಡ ಭರವಸೆ ನೀಡಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ ಹಾಗೂ ಅಡುಗೆ ಅನಿಲದ ಯಾವುದೇ ಕೊರತೆಯಿಲ್ಲ ಮತ್ತು ಪೂರೈಕೆ ವ್ಯವಸ್ಥೆಯು ಅತ್ಯಂತ ಸುಗಮವಾಗಿ ಸಾಗುತ್ತಿದೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಶೇಷವಾಗಿ ಎಲ್ಪಿಜಿ ಲಭ್ಯತೆಯ ಬಗ್ಗೆ ವ್ಯಕ್ತವಾಗಿದ್ದ ಕಳವಳಕ್ಕೆ ಉತ್ತರಿಸಿದ ಸಚಿವರು, “ದೇಶೀಯ ಎಲ್ಪಿಜಿ ಪೂರೈಕೆಯು ಸಂಪೂರ್ಣ ಸುರಕ್ಷಿತವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಅಥವಾ ರಾಜಕೀಯ ಬಿಕ್ಕಟ್ಟುಗಳು ನಮ್ಮ ಅಡುಗೆಮನೆಯ ಮೇಲೆ ಪರಿಣಾಮ ಬೀರದಂತೆ ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ,” ಎಂದು ತಿಳಿಸಿದರು.
ಭಾರತವು ತನ್ನ ಒಟ್ಟು ಎಲ್ಪಿಜಿ ಬೇಡಿಕೆಯ 60% ಭಾಗವನ್ನು ಗಲ್ಫ್ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತದೆ. ಇರಾನ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಅಡೆತಡೆಗಳು ಪೂರೈಕೆಯ ಮೇಲೆ ಸಣ್ಣ ಮಟ್ಟಿನ ಪ್ರಭಾವ ಬೀರಿದ್ದರೂ, ಸರ್ಕಾರವು ಎದೆಗುಂದದೆ ಪರ್ಯಾಯ ಮೂಲಗಳಿಂದ ತೈಲ ಮತ್ತು ಅನಿಲವನ್ನು ಪಡೆಯಲು ಮುಂದಾಗಿದೆ.
ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯ ಮೂಲಕ ಭಾರತಕ್ಕೆ ಬರಬೇಕಿದ್ದ ತೈಲ ಹಡಗುಗಳಿಗೆ ಇರಾನ್ ಅನುಮತಿ ನೀಡಿದ್ದು, ಈಗಾಗಲೇ ಎರಡು ಹಡಗುಗಳು ಭಾರತದತ್ತ ಮುಖ ಮಾಡಿವೆ ಎನ್ನಲಾಗಿದೆ. ಈ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ಸಚಿವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ, ಈ ವಿಚಾರದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.



