ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರೂರ್ನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ತಮಿಳು ನಟ ವಿಜಯ್ ದೆಹಲಿಯಲ್ಲಿ ಕೇಂದ್ರ ತನಿಖಾ ದಳದ ಮುಂದೆ ಹಾಜರಾಗಿ ಸುಮಾರು ಏಳು ಗಂಟೆಗಳ ಕಾಲ ವಿಚಾರಣೆಗೆ ಒಳಗಾದರು.
ಕಳೆದ ವರ್ಷ ತಮಿಳುನಾಡಿನ ಕರೂರ್ನಲ್ಲಿ ನಡೆದ ರಾಜಕೀಯ ರ್ಯಾಲಿಯ ವೇಳೆ ಭಾರೀ ಜನಸಂದಣಿ ಕಾರಣದಿಂದ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದು, 60ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಸಾರ್ವಜನಿಕ ಸುರಕ್ಷತೆಯ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾದ ಈ ಪ್ರಕರಣವನ್ನು ಬಳಿಕ ಸಿಬಿಐಗೆ ಹಸ್ತಾಂತರಿಸಲಾಗಿತ್ತು.
ಇದನ್ನೂ ಓದಿ:
ತನಿಖೆಯ ಭಾಗವಾಗಿ ಅಧಿಕಾರಿಗಳು ವಿಜಯ್ ಅವರನ್ನು ವಿಚಾರಣೆಗೆ ಕರೆದಿದ್ದರು. ದೆಹಲಿಯ ಸಿಬಿಐ ಮುಖ್ಯ ಕಚೇರಿಯಲ್ಲಿ ನಡೆದ ವಿಚಾರಣೆಯಲ್ಲಿ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದಾಗ ಅಲ್ಲಿದ್ದ ಅಭಿಮಾನಿಗಳತ್ತ ಕೈ ಬೀಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ದೆಹಲಿಗೆ ಆಗಮಿಸಿದ ಬಳಿಕ ವಿಜಯ್ ತಾಜ್ ಪ್ಯಾಲೇಸ್ ಹೋಟೆಲ್ನಲ್ಲಿ ತಂಗಿದ್ದರು ಎನ್ನಲಾಗಿದೆ. ಕರೂರ್ ದುರಂತಕ್ಕೆ ಕಾರಣವಾದ ನಿರ್ವಹಣಾ ದೋಷಗಳು ಹಾಗೂ ಜನಸಂದಣಿ ನಿಯಂತ್ರಣದಲ್ಲಿ ಉಂಟಾದ ಗೊಂದಲಗಳ ಬಗ್ಗೆ ಸಿಬಿಐ ಇನ್ನೂ ತನಿಖೆ ಮುಂದುವರಿಸುತ್ತಿದ್ದು, ಈ ವಿಚಾರಣೆಯಲ್ಲಿ ದೊರೆತ ಮಾಹಿತಿ ಮುಂದಿನ ಕ್ರಮಕ್ಕೆ ಪ್ರಮುಖವಾಗುವ ಸಾಧ್ಯತೆ ಇದೆ.



