ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಭಾನುವಾರ ಅಪ್ಪಳಿಸಿದ ಪ್ರಬಲ ನಾರ್ವೆಸ್ಟರ್ ಸುಂಟರಗಾಳಿ ಭಾರೀ ಅನಾಹುತಕ್ಕೆ ಕಾರಣವಾಗಿದೆ. ಬಿರುಗಾಳಿಯ ಪರಿಣಾಮವಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 70ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ. ಹಲವರು ಗಾಯಗೊಂಡಿರುವುದಾಗಿ ಆರಂಭಿಕ ವರದಿಗಳು ತಿಳಿಸಿವೆ.
ಕರಂಜಿಯಾ ಸಮೀಪದ ಕಿಯಾ ಗ್ರಾಮದಲ್ಲಿ ಗಾಳಿಯ ಅಬ್ಬರ ಅತ್ಯಧಿಕವಾಗಿದ್ದು, ಅಲ್ಲಿ ಹಲವಾರು ಮಣ್ಣು ಮತ್ತು ಹುಲ್ಲಿನಿಂದ ನಿರ್ಮಿತ ಮನೆಗಳ ಮೇಲ್ಛಾವಣಿಗಳು ಕಿತ್ತು ಹೋಗಿವೆ. ಏಕಾಏಕಿ ಬೀಸಿದ ಪ್ರಬಲ ಗಾಳಿ ಮತ್ತು ಮಳೆಯ ಕಾರಣ ಸ್ಥಳೀಯರು ಭೀತಿಗೊಳಗಾಗಿದ್ದಾರೆ.
ಇದನ್ನೂ ಓದಿ:
ಬಿರುಗಾಳಿಯ ಪರಿಣಾಮವಾಗಿ ಹಲವಾರು ದೊಡ್ಡ ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯವಾಗಿದೆ. ಇದರಿಂದ ಕೆಲವು ರಸ್ತೆಗಳಲ್ಲಿ ಸಂಚಾರಕ್ಕೂ ಅಡ್ಡಿಯಾಗಿದೆ. ಗಾಳಿಯ ತೀವ್ರತೆಗೆ ರಸ್ತೆ ಮೇಲೆ ಸಂಚರಿಸುತ್ತಿದ್ದ ವಾಹನಗಳಿಗೂ ಹಾನಿಯಾಗಿದೆ. ಇದೀಗ ಜಿಲ್ಲಾಡಳಿತ ಅಧಿಕಾರಿಗಳು ಹಾನಿಯ ಪ್ರಮಾಣವನ್ನು ಪರಿಶೀಲಿಸುತ್ತಿದ್ದು, ಪೀಡಿತ ಕುಟುಂಬಗಳಿಗೆ ನೆರವು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ರಕ್ಷಣಾ ತಂಡಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿವೆ.



