ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ತಲೆನೋವಾಗಿರುವ ಅಕ್ರಮ ಮದ್ಯ ಮಾರಾಟ ಮತ್ತು ತಯಾರಿಕೆಯನ್ನು ಮಟ್ಟಹಾಕಲು ಕರ್ನಾಟಕ ಸರ್ಕಾರ ಈಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಈ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಅಬಕಾರಿ ಅಕ್ರಮ ತಡೆಗಟ್ಟಲು ಹಳೆಯ ಕರ್ನಾಟಕ ಅಬಕಾರಿ ಕಾಯ್ದೆಯನ್ನು ಪರಿಷ್ಕರಿಸಿ, ಹೊಸ ಕಾಯ್ದೆ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಅಕ್ರಮ ಮದ್ಯ ಮಾರಾಟವನ್ನು ಇನ್ನು ಮುಂದೆ ಕೇವಲ ಅಬಕಾರಿ ಕಾಯ್ದೆಯಡಿ ಮಾತ್ರವಲ್ಲದೆ, ಮಾದಕ ವಸ್ತು ನಿಯಂತ್ರಣ ಕಾಯ್ದೆ ಅಡಿಯೂ ತರುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದು ಜಾರಿಯಾದಲ್ಲಿ ಅಕ್ರಮಕೋರರಿಗೆ ಕಠಿಣ ಶಿಕ್ಷೆ ಗ್ಯಾರಂಟಿ.
ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಅವರು, “ಕಿರಾಣಿ ಅಂಗಡಿಗಳಲ್ಲೂ ಅಕ್ರಮವಾಗಿ ಮದ್ಯ ಸಿಗುತ್ತಿದೆ. ಇದನ್ನು ತಡೆಯಲು ವಿಶೇಷ ಪಡೆಗಳನ್ನು ರಚಿಸಿ” ಎಂದು ಒತ್ತಾಯಿಸಿದರು.
ಸಚಿವರು ಉತ್ತರಿಸುತ್ತಾ, ಈಗಾಗಲೇ ಹೆದ್ದಾರಿಗಳಲ್ಲಿ ನಿರಂತರ ಗಸ್ತು ಹಾಗೂ ಸಂಶಯಾಸ್ಪದ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಕ್ರಮ ಹತ್ತಿಕ್ಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.



