March 19, 2026
Thursday, March 19, 2026
spot_img

ಡಾ. ಎಂ.ಮೋಹನ್ ಆಳ್ವರ ಮುಕುಟಕ್ಕೆ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ ಫೆಲೋಶಿಪ್ ಗೌರವದ ಗರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಉತ್ತರ ಪ್ರದೇಶದ ವಾರಾಣಸಿಯ ಬನಾರಸ್ ಹಿಂದೂ ವಿವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದ 29ನೇ ಪದವಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಆಯುರ್ವೇದ ಹಾಗೂ ಶಿಕ್ಷಣ ತಜ್ಞ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ರೂವಾರಿ ಡಾ. ಎಮ್ ಮೋಹನ್ ಆಳ್ವಾರಿಗೆ “ಫೆಲೋ ಆಫ್ ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ (FRAV)” ಪ್ರತಿಷ್ಠಿತ ಗೌರವ ಪ್ರದಾನಿಸಲಾಯಿತು.

ಈ ಗೌರವವನ್ನು ಆಯುರ್ವೇದ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ, ಸಂಶೋಧನೆ, ಶಿಕ್ಷಣ ಹಾಗೂ ಪರಂಪರೆಯ ಸಂರಕ್ಷಣೆಯಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ ನೀಡಲಾಗುತ್ತದೆ. ಡಾ. ಆಳ್ವರು ಈ ಎಲ್ಲಾ ಕ್ಷೇತ್ರಗಳಲ್ಲಿ ಸಲ್ಲಿಸಿದ ಮಹತ್ವದ ಕೊಡುಗೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಡಾ. ಆಳ್ವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೂಲಕ ಆಯುರ್ವೇದ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿ, ಅನೇಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ತರಬೇತಿ ನೀಡುತ್ತಿದ್ದಾರೆ. ಆಯುರ್ವೇದ ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಳ್ವರು, ಉಚಿತ ವೈದ್ಯಕೀಯ ಶಿಬಿರಗಳು, ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಹಾಗೂ ಪಾರಂಪರಿಕ ಚಿಕಿತ್ಸಾ ವಿಧಾನಗಳ ಮೂಲಕ ಸಮಾಜಮುಖಿ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತಿದ್ದಾರೆ. ಪ್ರಾಚೀನ ಆಯುರ್ವೇದ ಜ್ಞಾನವನ್ನು ಆಧುನಿಕ ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಸಂಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಈ ಮೂಲಕ ಆಯುರ್ವೇದವನ್ನು ಸಮಗ್ರ ಜೀವನಶೈಲಿಯಾಗಿ ಜನರಲ್ಲಿ ಪರಿಚಯಿಸಿದ್ದಾರೆ.

ಶಿಕ್ಷಣ, ಸಂಸ್ಕೃತಿ ಮತ್ತು ಆರೋಗ್ಯ ಕ್ಷೇತ್ರಗಳನ್ನು ಒಟ್ಟಿಗೆ ಬೆಳೆಸುವ ದೃಷ್ಟಿಕೋನವು ಅವರನ್ನು ವಿಶಿಷ್ಟ ವ್ಯಕ್ತಿತ್ವವನ್ನಾಗಿಸಿದೆ. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುವ ಜೊತೆಗೆ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿಯೂ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಆಳ್ವಾ ಫಾರ್ಮಸಿಯ ಮೂಲಕ ಆಯುರ್ವೇದ ಔಷಧಗಳ ತಯಾರಿಕೆ, ಗುಣಮಟ್ಟದ ನಿಯಂತ್ರಣ ಮತ್ತು ಪರಂಪರೆಯ ಔಷಧ ಪದ್ಧತಿಗಳ ಸಂರಕ್ಷಣೆಗೆ ಉತ್ತೇಜನ ನೀಡಲಾಗಿದೆ. ಇದಲ್ಲದೆ, ಶೋಭಾವನವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಅಭಿವೃದ್ಧಿಪಡಿಸಲಾದ 150 ಏಕರೆ ವ್ಯಾಪ್ತಿಯ ವಿಶಾಲ ಔಷಧೀಯ ಸಸ್ಯಗಳ ತೋಟವಾಗಿದ್ದು, ಇದು 2000 ಕ್ಕೂ ಹೆಚ್ಚು ಸಸ್ಯ ಪ್ರಭೇದಗಳ ‘ ವನ ‘ ವಾಗಿದೆ. ಇಲ್ಲಿ ಆಯುರ್ವೇದ ಸಂಶೋಧನೆ, ಸಸ್ಯಾಧಾರಿತ ಶಿಕ್ಷಣ ಮತ್ತು ಜೈವಿಕ ಕೃಷಿಗೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಪ್ರಾಯೋಗಿಕ ಅಧ್ಯಯನಕ್ಕೆ ಅನುವು ಮಾಡಿಕೊಡುತ್ತಿದೆ. ಡಾ. ಎಂ. ಮೋಹನ್ ಆಳ್ವರಿಗೆ ಪ್ರದಾನಗೊಂಡಿರುವ ಈ ಗೌರವವು ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಕರ್ನಾಟಕದ ಆಯುರ್ವೇದ ಮತ್ತು ಶಿಕ್ಷಣ ಕ್ಷೇತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಲಭಿಸಿದ ಮಹತ್ವದ ಗೌರವವಾಗಿದೆ.

ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೆಚಾ, ನವದೆಹಲಿಯ ಭಾರತೀಯ ಸಂಪ್ರದಾಯಿಕ ವೈದ್ಯಕೀಯ ರಾಷ್ಟ್ರೀಯ ಆಯೋಗ ದ ಅಧ್ಯಕ್ಷ ಡಾ. ಮನೀಷಾ ಕೋಟೇಕರ್, ಬನಾರಸ್ ಹಿಂದು ವಿ ವಿಯ ಕುಲಪತಿ ಡಾ ಅಜಿತ್ ಕುಮಾರ್ ಚತುರ್ವೇದಿ, ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ದ ನಿರ್ದೇಶಕ ಡಾ ವಂದನ ಸಿರೋಹಾ ಹಾಗೂ ಇನ್ನಿತರ ಗಣ್ಯರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !