ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ಉಕ್ಕಡ ಗ್ರಾಮದಲ್ಲಿ 15 ದಿನಗಳ ಶಿಶು ಏಕಾಏಕಿ ಮೃತಪಟ್ಟಿದ್ದು, ತಂದೆ ವಿಷ ನೀಡಿ ಕೊಂದಿರುವ ಆರೋಪ ಎದುರಾಗಿದೆ.
ತಾಯಿ ತನ್ನ ಪತಿ ಭೀಮರಾಯ ತಮ್ಮ ನವಜಾತ ಶಿಶುವಿಗೆ ವಿಷ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಶಿಶು ಕೇವಲ ಎರಡು ವಾರಗಳ ಹಿಂದೆ ಜನಿಸಿತ್ತು.
ಹೆರಿಗೆ ಹಿನ್ನೆಲೆ ತಾಯಿ ಶೀಲಾ ತವರು ಮನೆಯಲ್ಲಿ ವಾಸವಾಗಿದ್ದರು. ಮಾ.17ರಂದು ಮಧ್ಯಾಹ್ನ ಪತ್ನಿ ಹಾಗೂ ಮಗುವನ್ನು ಭೇಟಿ ಮಾಡಲು ಬಂದ ತಂದೆ ಭೀಮರಾಯ ಕೆಲಕಾಲ ಅವರೊಂದಿಗೆ ಕಾಲ ಕಳೆದ ಬಳಿಕ ತನ್ನ ಊರಿಗೆ ಮರಳಿದ್ದಾನೆ. ಆದರೆ ಆತ ಹೋದ ಕೆಲವೇ ಹೊತ್ತಿನಲ್ಲಿ ಮಗು ಏಕಾಏಕಿ ಸಾವನ್ನಪ್ಪಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಮಗು ಆರೋಗ್ಯವಾಗಿದ್ದರೂ ದಿಢೀರ್ ಸಾವಿಗೆ ಕಾರಣ ಏನು ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ಭೀಮರಾಯ ಸಣ್ಣ ಮಾತ್ರೆ ತಂದು ಮಗುವಿಗೆ ಏನೋ ಕುಡಿಸಿದ್ದಾನೆ ಎಂಬ ಆರೋಪವನ್ನು ಪತ್ನಿ ಶೀಲಾ ಹಾಗೂ ಆಕೆಯ ಕುಟುಂಬಸ್ಥರು ಮಾಡಿದ್ದಾರೆ.
ಘಟನೆಯ ನಂತರ ಭೀಮರಾಯ ನಾಪತ್ತೆಯಾಗಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ. ಮೃತ ಮಗುವಿನ ಶವವನ್ನು ಬಿಮ್ಸ್ ಆಸ್ಪತ್ರೆ ಮುಂದೆ ಇಟ್ಟು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.


