ಹೊಸದಿಗಂತ ಹಾನಗಲ್ಲ:
ಪಟ್ಟಣದ ಕೋರ್ಟ್ ಹತ್ತಿರ ಇಂದು ಮಧ್ಯಾಹ್ನ ಸಾರ್ವಜನಿಕರ ಮೇಲೆ ಹೆಜ್ಜೇನುಗಳ ಗುಂಪು ಏಕಾಏಕಿ ದಾಳಿ ಮಾಡಿದ್ದು, ಇಡೀ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ದಿಕ್ಕಾಪಾಲಾಗಿ ಓಡಬೇಕಾಯಿತು.
ಈ ದಾಳಿಯಲ್ಲಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಮಂದಿ ಜೇನಿನ ಕಚ್ಚುವಿಕೆಗೆ ಒಳಗಾಗಿದ್ದಾರೆ. ತಕ್ಷಣವೇ ಎಲ್ಲರನ್ನೂ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.
ಕೋರ್ಟ್ ಕೆಲಸಕ್ಕೆ ಬಂದವರು ಹಾಗೂ ದಾರಿಯಲ್ಲಿ ಹೋಗುತ್ತಿದ್ದವರೇ ಹೆಚ್ಚಾಗಿ ಈ ದಾಳಿಗೆ ತುತ್ತಾಗಿದ್ದಾರೆ. ಆಸ್ಪತ್ರೆಯಲ್ಲಿ ಈಗ ಗಾಯಾಳುಗಳ ಸಂಬಂಧಿಕರ ಆತಂಕ ಹೆಚ್ಚಾಗಿದ್ದು, ವೈದ್ಯರು ಸೂಕ್ತ ನಿಗಾ ವಹಿಸಿದ್ದಾರೆ.



