July 3, 2026
Friday, July 3, 2026
spot_img

‘ರಾಮಮಂದಿರ ಮಾತ್ರವಲ್ಲ, ವಕ್ಫ್ ಆಸ್ತಿಗಳ ಬಗ್ಗೆಯೂ ಸರ್ಕಾರ ಉತ್ತರಿಸಲಿ’: ಎನ್ ರವಿಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಮಂದಿರ ಹುಂಡಿ ಕಳ್ಳತನ ಕುರಿತು ನಾವು ಎಲ್ಲಿಯೂ ತನಿಖೆ ಆಗಬಾರದು ಅಂತ ಹೇಳಿಲ್ಲ, ತನಿಖೆಯಾಗಲಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಇದರ ಜೊತೆಗೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ಎಷ್ಟು ಜನ ರೈತರ ಜಮೀನು ಕಬಳಿಸಿದೆ ಎಂಬುದರ ಕುರಿತು ಸರ್ಕಾರ ರಿಪೋರ್ಟ್ ನೀಡಿದೆಯಾ? ಹತ್ತು ವರ್ಷಗಳ ಹಿಂದೆ ವಕ್ಫ್ ಆಸ್ತಿ ಎಷ್ಟಿತ್ತು,ಈಗ ಎಷ್ಟಿದೆ ? ಕುರಿತು ಸರ್ಕಾರ ಮಾತನಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಹೇಳಿದರು.

ನಗರದ ಐವನ್ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಒಂದೇ ಅಲ್ಲ.ಇಡೀ ದೇಶಾದ್ಯಂತ ಎಷ್ಟು ಮಸೀದಿಗಳು ಸಾರ್ವಜನಿಕರ ಆಸ್ತಿ ಕಬಳಿಸಿದೆ. ದೇಶಾದ್ಯಂತ ಎಷ್ಟು ವಕ್ಫ್ ಆಸ್ತಿ ಹೆಚ್ಚಾಗಿದೆ.?ಇದರ ಬಗ್ಗೆಯೂ ಕೂಡ ನಮ್ಮ ಬುದ್ಧಿವಂತ, ಮುತ್ಸದ್ದಿ, ಅತ್ಯಂತ ಪ್ರಬುದ್ಧ ನಾಯಕರಾದ ಸಚಿವ ಪ್ರಿಯಾಂಕ್ ಖರ್ಗೆಯವರು ಬೆಳಕು ಚೆಲ್ಲುವ ಕೆಲಸ ಮಾಡಬೇಕು ಎಂದು ಹೇಳಿದರು.

ಗೃಹ ಸಚಿವರ ತವರು ಕ್ಷೇತ್ರದಲ್ಲಿ ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ ರಾತ್ರೋರಾತ್ರಿ ಫೋಕ್ಸೋ ಪ್ರಕರಣದ ಆರೋಪಿಯೊಬ್ಬ ಪರಾರಿಯಾಗುತ್ತಾನೆ ಅಂದ್ರೆ ಏನರ್ಥ.ಈ ಬಗ್ಗೆ ಉಸ್ತುವಾರಿ ಸಚಿವರು ಯಾಕೆ ಮೌನ ತಾಳಿದ್ದಾರೆ.ವಿಶ್ವದ ಆಗು ಹೋಗುಗಳ ಬಗ್ಗೆ ಮಾಹಿತಿ ತೆಗೆದುಕೊಂಡು ಮಾತನಾಡುವ ಗೃಹ ಸಚಿವ ಖರ್ಗೆ ಅವರಿಗೆ ಅವರದ್ದೇ ಸ್ವಂತ ಊರಿನಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಪರಾರಿಯಾಗಿದ್ದು ಗೊತ್ತಾಗುವುದಿಲ್ವ.ಕೂಡಲೇ ಠಾಣೆಯ ಸಿಪಿಐ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ ಅವರು,ಎನ್ ಬೇಕಾದರೂ ಮಾಡಿದರು ನಡೆಯುತ್ತದೆ ಎಂಬ ಭಾವನೆಯಿಂದ ಹೊರ ಬರಬೇಕು ಎಂದರು.

ಇದನ್ನೂ ಓದಿ:

ಇತ್ತೀಚೆಗೆ ರಾಜ್ಯ ಸರ್ಕಾರ ತನ್ನ ಸಚಿವ ಸಂಪುಟದಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಶ್ ದರ್ಗಾದಲ್ಲಿ ಶಿವಲಿಂಗ ಪೂಜೆ ವೇಳೆ ಕಲ್ಲು ತೂರಾಟ ನಡೆಸಿದ ಪ್ರಕರಣದಲ್ಲಿ ಭಾಗಿಯಾದವರ ಮೇಲಿನ ಕೇಸ್ ವಾಪಸ್ ಪಡೆದಿರುವ ನಿರ್ಣಯಕ್ಕೆ ಕರ್ನಾಟಕ ಹೈಕೋರ್ಟ್ ಕಪಾಳ ಮೋಕ್ಷ ಮಾಡಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು.ರಾಜ್ಯ ಸರ್ಕಾರದಿಂದ ತುಷ್ಟೀಕರಣ ನೀತಿ ಮೇರೆ ಮೆರೆಯುತ್ತಿದೆ.ಈ ನೀತಿ ಇನ್ನಾದರೂ ಬದಲಾಗಬೇಕು ಎಂದು ಹೇಳಿದರು.

ರಾಜ್ಯಾದ್ಯಂತ ಗುಂಡಿ ಇದೆಯೋ ಅಥವಾ ಗುಂಡಿಗಳಲ್ಲೆ ರಾಜ್ಯವಿದೆಯೋ ಗೊತ್ತಿಲ್ಲ.ಎಲ್ಲ ರಸ್ತೆಗಳ ಕಾಮಗಾರಿ, ಅಭಿವೃದ್ಧಿ ಕಾರ್ಯಗಳು ಸ್ಥಗೀತವಾಗಿವೆ.ಶಾಸಕರೂ ಅನುದಾನ ಇಲ್ಲವೆಂದು ಅನ್ ಹ್ಯಾಪಿಯಲ್ಲಿದ್ದಾರೆ.ಇನ್ನೂ 20 ಸಚಿವರು ಯಾವಾಗ ಮಂತ್ರಿಯಾಗಿ ಬರುತ್ತಾರೋ ಗೊತ್ತಿಲ್ಲ.ಡಿಕೆ ಶಿವಕುಮಾರ್ ಸಿಎಂ ಆಗಿ ತಿಂಗಳಾದರೂ ಸಚಿವರ ನೇಮಕಾತಿ ಆಗುತ್ತಿಲ್ಲ.ಸಚಿವರ ನೇಮಕಾತಿ ಮಾಡಿದ್ರೆ ಇನ್ನೆನು ಸಮಸ್ಯೆ ಆಗಲಿದೆ ಎಂಬ ಚಿಂತನೆಯಲ್ಲಿ ಅಳೆದು ತೂಗಿ ಮಂತ್ರಿಗಿರಿ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದ ಅವರು, ಕೂಡಲೇ ರಾಜ್ಯದ ರೈತರ ಹಿತದೃಷ್ಟಿಯಿಂದ ಸರ್ವ ಪಕ್ಷ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ,ಆನಂದ ಪಾಟೀಲ್ , ವಿರೇಂದ್ರ ಪಾಟೀಲ್ ರಾಯಕೋಡ್ ಸೇರಿದಂತೆ ಇತರರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !