ಹೊಸದಿಗಂತ ಕಲಬುರಗಿ:
ಬಿಸಿಲ ನಾಡು ಅಂತಾನೇ ಹೆಸರಾದ ನಮ್ಮ ಕಲ್ಬುರ್ಗಿಯ ಚಿಂಚೋಳಿ ತಾಲೂಕಿನ ಚನ್ನೂರ ಗ್ರಾಮದಲ್ಲಿ ಸಾಯಂಕಾಲ ಸುರಿದ ಮಳೆ ನೋಡಿ ಜನರೆಲ್ಲಾ ಬೆಚ್ಚಿಬಿದ್ದಿದ್ದಾರೆ! ಇದು ನಮ್ಮ ಊರೋ ಅಥವಾ ಕಾಶ್ಮೀರದ ಗುಲ್ಮಾರ್ಗೋ ಅನ್ನೋ ಹಾಗೆ ರಸ್ತೆಯೆಲ್ಲಾ ಬಿಳಿ ಬಿಳಿ ಆಲಿಕಲ್ಲುಗಳು ರಾಶಿ ಬಿದ್ದಿದ್ದವು.
ಸಾಯಂಕಾಲ 5.30 ರಿಂದ 6 ಗಂಟೆಯವರೆಗೆ ಆಕಾಶದಿಂದ ಮಂಜಿನ ಗಡ್ಡೆಗಳೇ ಉದುರಿದವು. ಅದೆಷ್ಟು ಆಲಿಕಲ್ಲುಗಳು ಬಿದ್ದವಪ್ಪಾ ಅಂದ್ರೆ, ಚನ್ನೂರ ಗ್ರಾಮದ ರಸ್ತೆಗಳೆಲ್ಲಾ ಹಿಮದ ಹಾಸಿಗೆ ಹಾಸಿದಂತೆ ಕಾಣುತ್ತಿದ್ದವು. ಈ ವಿಚಿತ್ರ ದೃಶ್ಯ ನೋಡಲು ಜನರೆಲ್ಲಾ ಮೊಬೈಲ್ ಹಿಡಿದು ರಸ್ತೆಗೆ ಓಡಿ ಬಂದರು. “ನೋಡ್ರಿಪ್ಪಾ ನಮ್ಮೂರಲ್ಲಿ ಕಾಶ್ಮೀರ ಬಂದಿದೆ” ಅಂತ ವಿಡಿಯೋ ಮಾಡಿ ಸಂಭ್ರಮಿಸಿದರು.
ನೋಡಲು ಚೆಂದ ಕಂಡರೂ, ಈ ಅಕಾಲಿಕ ಆಲಿಕಲ್ಲು ಮಳೆ ನಮ್ಮ ಅನ್ನದಾತನ ಹೊಟ್ಟೆ ಮೇಲೆ ಹೊಡೆದಿದೆ. ಏಕಾಏಕಿ ಸುರಿದ ಈ ಮಳೆಯಿಂದಾಗಿ ಹೊಲದಲ್ಲಿದ್ದ ಬೆಳೆಗಳು ಮಣ್ಣು ಪಾಲಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಮುಂದೇನಾಗುತ್ತೋ ಅನ್ನೋ ಭಯ ಈಗ ಗ್ರಾಮಸ್ಥರನ್ನು ಕಾಡುತ್ತಿದೆ.



