ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಲು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ಭಾರತ ಯಾವುದೇ ದೇಶಗಳ ನಡುವೆ ‘ದಲ್ಲಾಳಿ ರಾಷ್ಟ್ರ’ ದಂತೆ ವರ್ತಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಹಾಗೂ ಇರಾನ್ ದೇಶಗಳ ನಡುವಿನ ಬಿಕ್ಕಟ್ಟು ಕಡಿಮೆ ಮಾಡಲು ಹೊರಟ್ಟಿರುವ ಪಾಕಿಸ್ತಾನದ ಕುರಿತು ವಿಪಕ್ಷಗಳ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತ ಬೇರೆ ದೇಶಗಳ ನಿರ್ಧಾರದ ಮೇಲೆ ನಿಂತಿಲ್ಲ. ನಮ್ಮ ನೆಲೆ ಗಟ್ಟಿಯಾಗಿದ್ದು, ನಾವು ಗೌರವದಿಂದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಅಮೆರಿಕ ಮತ್ತು ಇರಾನ್ ನಡುವೆ ಸಂಧಾನ ನಡೆಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮುಂದಾಗಿದ್ದು, ಇದಕ್ಕಾಗಿ ವೇದಿಕೆ ಸಿದ್ದಪಡಿಸಲು ಸಿದ್ದ ಎಂದು ಹೇಳಿದ್ದರು. ಆದರೆ ಇರಾನ್ ಅಮೆರಿಕ ಜೊತೆ ಯಾವುದೇ ಮಾತುಕತೆ ಇಲ್ಲ ಎಂದು ಕಡ್ಡಿ ಮುರಿದ್ದಂತೆ ಹೇಳಿಕೊಂಡಿದೆ.



