ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರದರ್ಶನಕ್ಕಿಂತ ಹೆಚ್ಚು ಚರ್ಚೆಯಾಗುತ್ತಿರುವುದು ವಿವಾದಾತ್ಮಕ ಅಂಪೈರ್ ತೀರ್ಪುಗಳು.
ಹೌದು! ಮೂರು ಪಂದ್ಯಗಳಲ್ಲಿ ಒಂದೇ ಗೆಲುವು ಮತ್ತು ಎರಡು ಸೋಲು ದಾಖಲಿಸಿರುವ ತಂಡ, ನಿರ್ಣಾಯಕ ಕ್ಷಣಗಳಲ್ಲಿ ತಮ್ಮ ವಿರುದ್ಧ ಹೋದ ಕೆಲವು ತೀರ್ಪುಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಸಂಬಂಧ ಫ್ರಾಂಚೈಸಿ ಬಿಸಿಸಿಐಗೆ ಅಧಿಕೃತ ದೂರು ಸಲ್ಲಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ.
ಮೊದಲ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಹೆನ್ರಿಕ್ ಕ್ಲಾಸೆನ್ ಅವರ ಕ್ಯಾಚ್ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬೌಂಡರಿ ಗೆರೆಯ ಬಳಿ ಫಿಲಿಪ್ ಸಾಲ್ಟ್ ಹಿಡಿದ ಕ್ಯಾಚ್ ವೇಳೆ ಅವರ ಕಾಲು ಕುಶನ್ಗೆ ತಾಗಿದೆಯೇ ಎಂಬುದರ ಬಗ್ಗೆ ಅಭಿಮಾನಿಗಳು ಪ್ರಶ್ನೆ ಎತ್ತಿದ್ದರು. ಆದರೂ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಈ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಔಟ್ ಆದ ಕ್ಷಣವೂ ಚರ್ಚೆಗೆ ಕಾರಣವಾಯಿತು. ಕ್ಯಾಚ್ ನೆಲಕ್ಕೆ ತಾಗಿದೆಯೇ ಎಂಬ ಅನುಮಾನಗಳ ನಡುವೆಯೂ ಔಟ್ ತೀರ್ಪು ಮುಂದುವರಿದಿದ್ದು, ಮೈದಾನದಲ್ಲೇ ಅಭಿಷೇಕ್ ಅಸಮಾಧಾನ ತೋರಿಸಿದ್ದರು.
ಇದನ್ನೂ ಓದಿ:
ಇನ್ನು ಲಕ್ನೋ ವಿರುದ್ಧದ ಪಂದ್ಯದಲ್ಲಿ ಆವೇಶ್ ಖಾನ್ ಬೌಂಡರಿ ಗೆರೆಯ ಹೊರಗಿನಿಂದ ಚೆಂಡನ್ನು ಮುಟ್ಟಿದ ಘಟನೆ ಹೊಸ ವಿವಾದಕ್ಕೆ ಕಾರಣವಾಗಿದೆ. ಇದನ್ನು ಅನ್ಯಾಯಕರ ಆಟ ಎಂದು ಪರಿಗಣಿಸಿ ಐದು ಪೆನಾಲ್ಟಿ ರನ್ ನೀಡಬೇಕಾಗಿತ್ತು ಎಂಬ ವಾದವೂ ಕೇಳಿಬಂದಿದೆ. ಈ ಘಟನೆ ನಂತರವೇ ಬಿಸಿಸಿಐಗೆ ದೂರು ನೀಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಸೋಶಿಯಲ್ ಮೀಡಿಯಾದಲ್ಲೂ ಆರೆಂಜ್ ಆರ್ಮಿ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮುಂದಿನ ಪಂದ್ಯಗಳಲ್ಲಿ ಅಂಪೈರಿಂಗ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.



