ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ರಾಜಕೀಯದಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಸಣ್ಣ ಮಟ್ಟದ ವಾಕ್ಸಮರ ಶುರುವಾಗಿದೆ. “ಜಾತ್ಯತೀತ ವ್ಯವಸ್ಥೆ ಉಳಿಸಲು ಶ್ರಮಿಸುತ್ತಿರುವ ನಿಜವಾದ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಬೆಂಬಲಿಸುತ್ತಿದ್ದಾರೆ” ಎಂಬ ವಿಜಯ್ ಅವರ ಹೇಳಿಕೆಗೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ವಿಜಯ್ ಅವರಿಗೆ ಇನ್ನೂ ರಾಜಕೀಯ ಪ್ರಬುದ್ಧತೆ ಬಂದಿಲ್ಲ. ಅವರು ಅಪ್ರಬುದ್ಧರಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅವರ ಜೊತೆಗಿದ್ದಾರೆ ಎಂಬುದು ಕೇವಲ ಸುಳ್ಳು. ಬಹುಶಃ ಟಿಎಂಸಿ (ತೃಣಮೂಲ ಕಾಂಗ್ರೆಸ್) ನಾಯಕರು ಅವರ ಜೊತೆ ಇರಬಹುದೇನೋ, ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ,” ಎಂದು ಲೇವಡಿ ಮಾಡಿದರು.
“ನಮ್ಮ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷವು ತಮಿಳುನಾಡಿನಲ್ಲಿ ಡಿಎಂಕೆಯೊಂದಿಗೆ ಗಟ್ಟಿಯಾಗಿ ನಿಂತಿದೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟ ಮೂರನೇ ಎರಡರಷ್ಟು ಬಹುಮತದೊಂದಿಗೆ ಭರ್ಜರಿ ಜಯಗಳಿಸಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ ವಿಜಯ್ ಅವರ ಹೇಳಿಕೆಯನ್ನು ಡಿಕೆಶಿ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.



