April 10, 2026
Friday, April 10, 2026
spot_img

ಜ್ಞಾನದ ಹಸಿವಿಗಿಲ್ಲ ವಯಸ್ಸಿನ ಅಡ್ಡಿ: ಮಗನೊಂದಿಗೆ ಮೊದಲ ಪ್ರಯತ್ನದಲ್ಲೇ ಪಿಯುಸಿ ಪಾಸ್ ಮಾಡಿದರು 57ರ ಫೈನಾನ್ಶಿಯರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಲ್ಯ ಕಣೀರುತೋಟದ ನಿವಾಸಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿರುವ ಮೋಹನ್ ರಾಜ್ ಅಮೀನ್ ಅವರು ದ್ವಿತೀಯ ಪಿಯುಸಿ ಪರೀಕ್ಷೆ ಬರೆದು, ಮಗನೊಂದಿಗೆ ಮೊದಲ ಪ್ರಯತ್ನದಲ್ಲೇ ತೇರ್ಗಡೆಗೊಂಡು ಸಂಭ್ರಮಿಸಿದ್ದಾರೆ.

ಫೈನಾನ್ಸ್ ವ್ಯವಹಾರ ಮಾಡುವ ಇವರಿಗೆ ಮದುವೆಯಾಗಿ ಮೂವರು ಮಕ್ಕಳಾದರೂ ಪಿಯು ಶಿಕ್ಷಣ ಸಂಪೂರ್ಣಗೊಳಿಸದ ಕೊರಗು ಕಾಡುತ್ತಿತ್ತು.

ಮಗ ಪಿಯುಸಿ ಪರೀಕ್ಷೆ ಬರೆಯುವಾಗ ತಾನೂ ಪಿಯು ಶಿಕ್ಷಣ ಸಂಪೂರ್ಣಗೊಳಿಸಿದರೆ ಮಗನಿಗೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬರಬಹುದೆಂದು ನಿರ್ಧರಿಸಿದ ಅವರು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಕಲಾ ವಿಭಾಗದ ಆರು ವಿಷಯಗಳಲ್ಲಿ 324 ಅಂಕಗಳನ್ನ ಪಡೆದು ದ್ವಿತೀಯ ದರ್ಜೆ ಶ್ರೇಣಿಯಲ್ಲಿ ತೇರ್ಗಡೆಗೊಂಡು, ಮಗನ ಪಿಯುಸಿ ಫಲಿತಾಂಶದೊಂದಿಗೆ ಸಂಭ್ರಮಿಸಿದ್ದಾರೆ.

ಮೋಹನ್ ರಾಜ್ ಅವರು ಕೊಲ್ಯದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಮುಗಿಸಿ,1984 ರಲ್ಲಿ ಉಳ್ಳಾಲದ ಮದನಿ ಕಾಲೇಜಲ್ಲಿ ಪ್ರಥಮ ಪಿಯುಸಿ ಶಿಕ್ಷಣ ಪಡೆದಿದ್ದರು. ದ್ವಿತೀಯ ಪಿಯುಸಿ ಶಿಕ್ಷಣಗಳಿಸಲು ಅಂದಿನ ದಿನಗಳಲ್ಲಿ ಮೋಹನ್ ರಾಜ್ ಅವರಿಗೆ ಪೂರಕ ವಾತಾವರಣ ಲಭಿಸಿರಲಿಲ್ಲ. ಬಡತನ, ಕುಟುಂಬ ನಿರ್ವಹಣೆಯ ಜವಬ್ದಾರಿಯು ಅವರ ಹೆಗಲ ಮೇಲೇರಿದ ಪರಿಣಾಮ ಅವರು ಕೆಲಸಕ್ಕೆ ತೆರಳುವ ಅನಿವಾರ್ಯತೆ ಬಂದೊದಗಿತ್ತು. ನಂತರದ ದಿನದಲ್ಲಿ ಮದುವೆಯಾಗಿ ಮಕ್ಕಳು ಜನಿಸಿ ಕಷ್ಟ ಪಟ್ಟು ವ್ಯವಹಾರದಲ್ಲಿ ಯಶಸ್ಸು ಪಡೆದರೂ ಸಹ ಪಿಯು ಶಿಕ್ಷಣ ಸಂಪೂರ್ಣಗೊಳಿಸಲಂತೂ ಸಾಧ್ಯವೇ ಆಗಿರಲಿಲ್ಲ.

ಹಾಗಂತ ಮೋಹನ್ ರಾಜ್ ಅವರು ತನ್ನ ಮಕ್ಕಳನ್ನ ಶಿಕ್ಷಣದಿಂದ ವಂಚಿತಗೊಳಿಸಿರಲಿಲ್ಲ. ಅವರ ಹಿರಿಯ ಮಗಳು ಪೃಥ್ವಿರೇಖ ಅವರು ಬಿಎಸ್ಸಿ ಪದವೀಧರೆಯಾಗಿದ್ದು ಖಾಸಗಿ ಉದ್ಯೋಗದಲ್ಲಿದ್ದಾರೆ. ಎರಡನೇ ಮಗಳು ಪೃಕೃತಿ ಕೂಡಾ ಡಿಪ್ಲೋಮ ವ್ಯಾಸಂಗ ಮುಗಿಸಿ ಖಾಸಗಿ ಉದ್ಯೋಗದಲ್ಲಿದ್ದಾರೆ.

ಇದನ್ನೂ ಓದಿ:

ಮೋಹನ್ ರಾಜ್ ಅವರ ಕಿರಿಯ ಮಗ ಕ್ಷಿತಿಜ್ ರಾಜ್ ಅವರು ಈ ಭಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ವಾಣಿಜ್ಯ ವಿಭಾಗದಲ್ಲಿ ಪ್ರಥಮ ದರ್ಜೆಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಮೋಹನ್ ರಾಜ್ ಅವರು ಮುಡಿಪುವಿನ ಸರಕಾರಿ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದು, ಅವರು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ತೆರಳಿದಾಗ ಅಲ್ಲಿ ಪರೀಕ್ಷಾ ನಿಯಂತ್ರಣಕ್ಕೆ ನಿಯೋಜನೆಗೊಂಡ ಶಿಕ್ಷಕರು ಮತ್ತು ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಒಮ್ಮೆ ಅವಕ್ಕಾಗಿದ್ದರಂತೆ. ಬಳಿಕ ಮೋಹನ್ ರಾಜ್ ಅವರೇ ತಾನು ಪರೀಕ್ಷೆ ಬರೆಯಲು ಬಂದಿರುವುದಾಗಿ ಮನವರಿಸಿದ ಬಳಿಕ ಅವರ ಉತ್ಸಾಹಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಬೆಂಬಲ ನೀಡಿದ್ದರಂತೆ.

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಮೋಹನ್ ರಾಜ್ ಅವರು ಕಳೆದ ನವೆಂಬರ್ ತಿಂಗಳಿಂದ ಸಿದ್ಧತೆ ನಡೆಸಿದ್ದು, ತೊಕ್ಕೊಟ್ಟಿನ ಖಾಸಗಿ ಟ್ಯೂಷನ್ ಸಂಸ್ಥೆಯಲ್ಲಿ ಬೆಳಿಗ್ಗೆ 8 ರಿಂದ 11ರ ವರೆಗೆ ಮತ್ತು ಸಾಯಂಕಾಲದ ವೇಳೆ ತರಬೇತಿ ಪಡೆಯುತ್ತಿದ್ದರು. ಮೋಹನ್ ರಾಜ್ ಅವರ ಪರೀಕ್ಷೆ ಬರೆಯುವ ಉತ್ಸಾಹಕ್ಕೆ ಪತ್ನಿ ಮಮತಾ ಅವರು ಸಂಪೂರ್ಣ ಪ್ರೋತ್ಸಾಹ ನೀಡಿದ್ದರು. ಅರ್ಧದಲ್ಲಿ ಮೊಟಕುಗೊಂಡಿದ್ದ ಪಿಯುಸಿ ಶಿಕ್ಷಣವನ್ನ ಸಂಪೂರ್ಣಗೊಳಿಸುವುದು ಮೋಹನ್ ರಾಜ್ ಅವರ ಕಳೆದ ನಲ್ವತ್ತೆರಡು ವರುಷಗಳ ಕನಸಾಗಿದ್ದು, ಅದನ್ನ ಅವರೀಗ ಸಾಕಾರಗೊಳಿಸಿದ್ದಾರೆ.

ಮಕ್ಕಳು ಶಿಕ್ಷಣ ಪಡೆಯಲು ಅದಕ್ಕೆ ತಕ್ಕ ಪೂರಕ ವಾತಾವರಣ ನಿರ್ಮಿಸಿ ಕೊಡುವುದು ಪೋಷಕರ ಜವಬ್ದಾರಿಯಾಗಿದೆ. ಇಂತಿಷ್ಟು ಅಂಕಗಳನ್ನ ಗಳಿಸಲೇ ಬೇಕೆಂಬ ಟಾರ್ಗೆಟನ್ನೂ ಪೋಷಕರು ಮಕ್ಕಳಿಗೆ ಕೊಡಬಾರದು. ಹಾಗಾದಲ್ಲಿ ಶಿಕ್ಷಣ ಎಂಬುದು ಮಕ್ಕಳಿಗೆ ಸರೆಮನೆಯಂತಾಗುತ್ತದೆಂದು ಮೋಹನ್ ರಾಜ್ ಅವರು ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.

ತನ್ನ ಮಧ್ಯ ವಯಸ್ಸಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಪಾಸಾಗುವ ಮೂಲಕ, ಸಾಧಿಸುವ ಛಲವೊಂದಿದ್ದರೆ ಅದಕ್ಕೆ ಬಡತನ, ವಯಸ್ಸು ಎಂದಿಗೂ ಅಡ್ಡಿ ಬರಲಾರದು ಎಂಬುದಕ್ಕೆ ಇಂದಿನ ಯುವ ಪೀಳಿಗೆಗೆ ಮೋಹನ್ ರಾಜ್ ಅವರು ಮಾದರಿಯಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !