April 16, 2026
Thursday, April 16, 2026
spot_img

ಎಎಪಿಗೆ ಹೊರೆಯಾದ ರಾಘವ್ ಚಡ್ಡಾಗೆ ‘ಆಸರೆ’: ‘Z+’ ಸೆಕ್ಯೂರಿಟಿ ಕೊಟ್ಟ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ರಾಜಕೀಯದಲ್ಲಿ ಹೊಸ ಬೆಳವಣಿಗೆಯಾಗಿ, ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರಿಗೆ ರಾಜ್ಯ ಸರ್ಕಾರ ನೀಡಿದ್ದ Z+ ಭದ್ರತೆಯನ್ನು ಹಿಂಪಡೆಯಲಾಗಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗವಾದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಇತ್ತೀಚೆಗೆ ಎಎಪಿ, ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ತೆಗೆದುಹಾಕಿತ್ತು. ಪಕ್ಷದ ಅಧಿಕೃತ ವಲಯದಿಂದ ಬಂದ ಮಾಹಿತಿಯ ಪ್ರಕಾರ, ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ನಿಲುವುಗಳ ಬಗ್ಗೆ ಅವರು ಮೃದು ಧೋರಣೆ ತಾಳುತ್ತಿದ್ದಾರೆ ಎಂಬ ಆರೋಪದ ನಡುವೆಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ಅವರ Z+ ಭದ್ರತೆಯನ್ನು ವಾಪಸ್ ಪಡೆದಿದೆ.

ಆದರೆ, ಈ ಬೆಳವಣಿಗೆಯ ಕೆಲವೇ ಗಂಟೆಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಮಧ್ಯಪ್ರವೇಶಿಸಿ ರಾಘವ್ ಚಡ್ಡಾಗೆ Z ವರ್ಗದ ಭದ್ರತೆಯನ್ನು ಒದಗಿಸಿದೆ ಎಂಬ ವರದಿಗಳು ಹೊರಬಿದ್ದಿವೆ. ದೆಹಲಿ ಮತ್ತು ಪಂಜಾಬ್‌ನಲ್ಲಿ ಹೆಚ್ಚುವರಿ ರಕ್ಷಣೆ ನೀಡಲಾಗುತ್ತಿದ್ದು, ಇತರೆ ಭಾಗಗಳಲ್ಲಿ Y+ ಭದ್ರತೆ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:

ಈ ಮಧ್ಯೆ, ತಮ್ಮ ವಿರುದ್ಧದ ಆರೋಪಗಳನ್ನು ರಾಘವ್ ಚಡ್ಡಾ ತಳ್ಳಿ ಹಾಕಿದ್ದು, ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದೇ ತನ್ನ ಕರ್ತವ್ಯ ಎಂದು ಹೇಳಿದ್ದಾರೆ. ಟೆಲಿಕಾಂ ರಿಚಾರ್ಜ್ ಅವಧಿ, ಡೇಟಾ ರೋಲ್ಓವರ್ ಹಾಗೂ ಗ್ರಾಹಕರ ಹಕ್ಕುಗಳಂತಹ ವಿಷಯಗಳನ್ನು ಅವರು ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದ ವಿಚಾರವೂ ಗಮನ ಸೆಳೆದಿದೆ.

ಒಟ್ಟಾರೆ, ಈ ಬೆಳವಣಿಗೆ ಎಎಪಿಯ ಒಳರಾಜಕೀಯ ಭಿನ್ನಾಭಿಪ್ರಾಯಗಳನ್ನು ಮತ್ತಷ್ಟು ಬಹಿರಂಗಪಡಿಸಿದ್ದು, ಮುಂದಿನ ದಿನಗಳಲ್ಲಿ ಇದರ ರಾಜಕೀಯ ಪರಿಣಾಮ ಹೇಗಿರಲಿದೆ ಎಂಬುದರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !