ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಆಯೋಜಿಸಲಾಗಿದ್ದ ಬೃಹತ್ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟಿಎಂಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. ಬಂಗಾಳದ ಮಹಿಳೆಯರ ಹಿತಾಸಕ್ತಿಯನ್ನು ಬಲಿಗೊಟ್ಟು, ಈ ಎರಡೂ ಪಕ್ಷಗಳು ಸಂಚು ರೂಪಿಸಿವೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.
ಸಂಸತ್ತಿನಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವ ಐತಿಹಾಸಿಕ ನಿರ್ಧಾರಕ್ಕೆ ಟಿಎಂಸಿ ಮತ್ತು ಕಾಂಗ್ರೆಸ್ ಅಡ್ಡಿಪಡಿಸುತ್ತಿವೆ. ನುಸುಳುಕೋರರ ಹಿತರಕ್ಷಣೆಗಾಗಿ ಕಾನೂನುಗಳನ್ನು ಗಾಳಿಗೆ ತೂರುತ್ತಿರುವ ಟಿಎಂಸಿ, ಧರ್ಮ ಆಧಾರಿತ ಮೀಸಲಾತಿಯನ್ನು ಉತ್ತೇಜಿಸುವ ಮೂಲಕ ಸಂವಿಧಾನದ ಆಶಯಕ್ಕೆ ದ್ರೋಹ ಬಗೆಯುತ್ತಿದೆ ಎಂದು ಮೋದಿ ಕಿಡಿಕಾರಿದರು.
ಟಿಎಂಸಿ ನಾಯಕರ ಆತಂಕದ ಮಾತುಗಳೇ ಅವರ ಸೋಲನ್ನು ಸಾರುತ್ತಿವೆ ಎಂದ ಪ್ರಧಾನಿ, ರಾಜ್ಯದ ಭ್ರಷ್ಟರು ಮತ್ತು ಗೂಂಡಾಗಳಿಗೆ ಕಡೇ ಎಚ್ಚರಿಕೆ ನೀಡಿದರು. “ಏಪ್ರಿಲ್ 29ರ ಒಳಗೆ ನಿಮ್ಮ ಸಮೀಪದ ಪೊಲೀಸ್ ಠಾಣೆಗಳಿಗೆ ಶರಣಾಗಿ. ಮೇ 4ರಂದು ಚುನಾವಣಾ ಫಲಿತಾಂಶ ಬಂದ ನಂತರ ಯಾವ ಭ್ರಷ್ಟರಿಗೂ, ಸಿಂಡಿಕೇಟ್ ಮುಖಂಡರಿಗೂ ಉಳಿಗಾಲವಿರುವುದಿಲ್ಲ” ಎಂದು ಗುಡುಗಿದರು.
ಬಂಗಾಳದ ಮುಂಬರುವ ಚುನಾವಣಾ ಫಲಿತಾಂಶವು ಹೊಸ ಇತಿಹಾಸವನ್ನು ಸೃಷ್ಟಿಸಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.



