ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಜಾರ್ಖಂಡ್ ಮೂಲದ ಪೂಜಾ ದತ್ತ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕೇಸ್ನ ಆಳಕ್ಕೆ ಇಳಿದಿರುವ ಪೊಲೀಸರು ಸ್ಫೋಟಕ ಮಾಹಿತಿಯನ್ನು ಕಲೆಹಾಕಿದ್ದಾರೆ.
ಆಡುಗೋಡಿ ಪೊಲೀಸರ ತನಿಖೆಯಲ್ಲಿ ಪೂಜಾ ಮಾನಸಿಕ ಖಿನ್ನತೆಗೆ, ರೂಮಿನಲ್ಲಿದ್ದ ವಿಚಿತ್ರ ನೋಟ್ಸ್ ಹಾಗೂ ಫೋಟೊಗಳಿಗೆ ಉತ್ತರ ಸಿಕ್ಕಿದೆ.
ಕೊರೋನಾ ಬಂದ ಸಮಯದಲ್ಲಿ ಮಗಳಿಗೆ ಮದುವೆಯಾಗಿತ್ತು. ಸ್ವಲ್ಪ ಸಮಯದ ನಂತರ ಕೊರೋನಾ ಕಾಲದಲ್ಲೇ ಅವಳ ಪತಿ ತೀರಿಕೊಂಡ್ರು. ಅವಳು ಇದನ್ನು ತುಂಬಾ ಮನಸ್ಸಿಗೆ ಹಚ್ಚಿಕೊಂಡಿದ್ದಳು. ಗಂಡ ಸತ್ತ ಬಳಿಕ ಯಾರ ಬಳಿಯೂ ಮಾತನಾಡದೇ ಸುಮ್ಮನಾಗಿಬಿಟ್ಟಿದ್ದಳು.
ಜೀವನದಲ್ಲಿ ಬದಲಾವಣೆಯನ್ನು ಹುಡುಕಿ ಆಕೆ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದ್ದಳು. ಮೂರು ವರ್ಷ ಕೆಲಸ ಮಾಡಿದ್ದಳು. ಅದಾದ ನಂತರ ಇದ್ದಕ್ಕಿದ್ದಂತೆಯೇ ಕೆಲಸದಿಂದ ರಿಸೈನ್ ಮಾಡಿದ್ದಳು. ಯಾಕೆ ಹೀಗೆಲ್ಲಾ ಮಾಡಿದೆ ಎಂದು ಕೇಳಿದ್ದಕ್ಕೆ ನಮ್ಮ ಜೊತೆ ಮಾತು ಬಿಟ್ಟಿದ್ದಳು. ನಂಬರ್ ಬದಲಾಯಿಸಿದ್ದಳು. ಅವಳನ್ನು ಹುಡುಕಿಕೊಂಡು ಎರಡು ಬಾರಿ ಬೆಂಗಳೂರಿಗೆ ಬಂದಿದ್ದೆ. ಆದರೆ ಅವಳು ಎಲ್ಲಿದ್ದಾಳೆ ಎಂದು ತಿಳಿದಿರಲಿಲ್ಲ ಎಂದು ಅವರ ತಂದೆ ಮಾಹಿತಿ ನೀಡಿದ್ದಾರೆ. ಒಂಟಿಯಾಗಿಯೇ ಇದ್ದ ಪೂಜಾಗೆ ಖಿನ್ನತೆ ಕಾಡಿರುವ ಅನುಮಾನ ವ್ಯಕ್ತವಾಗಿದೆ.
ಸಣ್ಣ ವಯಸ್ಸಿನಿಂದ ಓದುವ ಆಸಕ್ತಿ ಇತ್ತು ಪೂಜಾಗೆ. ಅವಳು ಆತ್ಮಹತ್ಯ ಮಾಡಿಕೊಳ್ಳುವವಳಲ್ಲ. ಆದರೆ ಬರವಣಿಗೆಯ ಅಭ್ಯಾಸವೇ ಅವಳಿಗೆ ಇರಲಿಲ್ಲ. ಗೋಡೆ ಮೇಲೆ ಇದನ್ನೆಲ್ಲಾ ಯಾರು ಬರೆದಿದ್ದಾರೆ ಗೊತ್ತಾಗ್ತಾ ಇಲ್ಲ. ಅವಳ ಅಮ್ಮನಿಗೂ ಆರೋಗ್ಯ ಸರಿ ಇಲ್ಲ. ಆಡುಗೋಡಿ ಪೊಲೀಸರು ಫೋನ್ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಫೋನ್ ಮಾಡಿದ್ರು. ಆಗಲೇ ನನಗೆ ವಿಚಾರ ಗೊತ್ತಾಗಿದ್ದು ಎಂದು ತಂದೆ ಹೇಳಿದ್ದಾರೆ.



