ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿದ್ದು, ಈ ಮೂಲಕ ರಾಜಕೀಯ ಇತಿಹಾಸದಲ್ಲಿ ಹೊಸ ಯುಗವೇ ಶುರುವಾಗಿದೆ.
ಈ ಗೆಲುವು ಕೇವಲ ರಾಜ್ಯದ ಅಭಿವೃದ್ಧಿ ಮಾತ್ರವಲ್ಲದೆ ದಶಕಗಳ ಕಾಲ ಮೂಲೆಗುಂಪು ಆಗಿದ್ದ ಧಾರ್ಮಿಕ ಮೌಲ್ಯಗಳ ಮರುಸ್ಥಾಪನೆಗೂ ದಾರಿದೀಪವಾಗಿದೆ. 21 ವರ್ಷಗಳ ಬಳಿಕ ಬಂಗಾಳದ ಆಸನ್ಸೋಲ್ನ ಬಸ್ಟಿನ್ ಬಜಾರ್ ಪ್ರದೇಶದಲ್ಲಿರುವ ಐತಿಹಾಸಿಕ ಶ್ರೀ-ಶ್ರೀ ದುರ್ಗಾಮಾತಾ ಚಾರಿಟಬಲ್ ಟ್ರಸ್ಟ್ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ.
ದುರ್ಗಾ ದೇಗುಲವು ಸ್ಥಳೀಯರ ಆರಾಧ್ಯ ದೈವ. ಕಳೆದ ಎರಡು ದಶಕಗಳಿಂದ ರಾಜಕೀಯ ಹಿತಾಸಕ್ತಿಗಳ ಸಂಘರ್ಷಕ್ಕೆ ಸಿಲುಕಿ ಬಂದ್ ಆಗಿದ್ದವು. ಇದೀಗ ಬಿಜೆಪಿಯ ಐತಿಹಾಸಿಕ ಗೆಲುವು ಭಕ್ತರಿಗೆ ದೇವರ ದರುಶನದ ಭಾಗ್ಯ ದೊರಕಿಸಿದೆ.
21 ವರ್ಷಗಳ ಕಾಲ ಈ ಮಂದಿರಕ್ಕೆ ಬೀಗ ಹಾಕಲಾಗಿತ್ತು . ಆದರೆ ದುರ್ಗಾ ಪೂಜೆ ಮತ್ತು ಲಕ್ಷ್ಮಿ ಪೂಜೆಯ ಸಂದರ್ಭ 10 ದಿನಗಳ ಕಾಲ ಬಾಗಿಲು ತೆರೆಯಲಾಗುತ್ತಿತ್ತು.
ಆಸನ್ಸೋಲ್ ಉತ್ತರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಬಿಜೆಪಿ ಶಾಸಕ ಕೃಷ್ಣೇಂದು ಮುಖರ್ಜಿ ಅವರು ಚುನಾವಣಾ ಪ್ರಚಾರದ ವೇಳೆ, ನಾವು ಗೆದ್ದರೆ ಮಂದಿರದ ಮೇಲಿರುವ ರಾಜಕೀಯ ಬೀಗವನ್ನು ಕಿತ್ತೆಸೆಯುತ್ತೇವೆ ಮತ್ತು ವರ್ಷದ 365 ದಿನಗಳೂ ಮಂದಿರವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತೇವೆ ಎಂದು ಘೋಷಿಸಿದ್ದರು. ಅದರಂತೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಮುಖರ್ಜಿ ಅವರು ಮಂದಿರಕ್ಕೆ ಭೇಟಿ ನೀಡಿ, ಬಾಗಿಲು ತೆರೆಯುವ ಮೂಲಕ ಭಕ್ತರ ಭರವಸೆಯನ್ನು ಈಡೇರಿಸಿದ್ದಾರೆ.
ಬಾಗಿಲು ತೆರೆಯುತ್ತಿದ್ದಂತೆ ಶಂಖನಾದ ಮತ್ತು ಜಯಘೋಷಗಳ ನಡುವೆ ಸಾವಿರಾರು ಭಕ್ತರು ದೇಗುಲ ಪ್ರವೇಶಿಸಿದರು. ಈ ಭಾವನಾತ್ಮಕ ಕ್ಷಣದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.



